ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಹಿತ್ಯಾಭಿಮಾನಿಗಳು ಹಾಗೂ ಸದಸ್ಯರು ಬದಲಾವಣೆ ಬಯಸಿದ್ದು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನೂತನ ಸಾರಥಿಯಾಗಿ ಎಂ.ಪಿ.ಕೇಶವಕಾಮತ್ ಅವರು ಆಯ್ಕೆಯಾದರು.
ಭಾನುವಾರ ನಡೆದ ಚುನಾವಣೆಯಲ್ಲಿ ಕೇಶವ ಕಾಮತ್ ಅವರು ಲೋಕೇಶ್ ಸಾಗರ್ ವಿರುದ್ಧ ಗೆಲುವು ಸಾಧಿಸಿದರು. ಮುಂದಿನ ಅವಧಿಗೆ ಜಿಲ್ಲೆಯಲ್ಲಿ ಕನ್ನಡ ತೇರು ಎಳೆಯಲು ಸಾಹಿತ್ಯಾಭಿಮಾನಿಗಳು ಅವಕಾಶ ನೀಡಿದರು.
ಕೇಶವ ಕಾಮತ್ ಅವರು 134 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಚಲಾವಣೆಯಾದ ಒಟ್ಟು ಮತಗಳಲ್ಲಿ ಕೇಶವ ಕಾಮತ್ ಅವರು 924 ಮತ ಪಡೆದರೆ, ಲೋಕೇಶ್ ಸಾಗರ್ 790 ಮತಗಳನ್ನು ಪಡೆದರು.
ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ತಾಲ್ಲೂಕಿನಲ್ಲಿ ಕೇಶವ ಕಾಮತ್ ಅವರು ಅಧಿಕ ಮತಗಳನ್ನು ಪಡೆದರು. ಸೋಮವಾರಪೇಟೆ ಹಾಗೂ ಕುಶಾಲನಗರದಲ್ಲಿ ಲೋಕೇಶ್ ಸಾಗರಗೆ ಮುನ್ನಡೆ ಸಿಕ್ಕಿತ್ತು. ಅಂತಿಮವಾಗಿ ಕೇಶವ ಕಾಮತ್ ಅವರು ಜಯ ಗಳಿಸಿದರು. 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಬಯಸಿದ್ದ ಲೋಕೇಶ್ ಪರಾಭವಗೊಂಡರು.