ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಕಳೆದ 24 ಗಂಟೆಯಲ್ಲಿ ಹುಲಿ ದಾಳಿಯಿಂದ ಮೃತಪಟ್ಟವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ನಾಗರಹೊಳೆ ಅರಣ್ಯದಂಚಿನ ಕೇರಳ ಗಡಿಭಾಗವಾದ ಕೆ.ಬಾಡಗ ಗ್ರಾಮದ ಚೇತನ್ (18) ಎಂಬುವವರು ಭಾನುವಾರ ಸಂಜೆ ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಭಾನುವಾರ ಸಂಜೆ ಹುಲಿ ದಾಳಿಗೆ ಮೃತಪಟ್ಟ ಚೇತನ್ (18) ಅವರ ತಾತ ರಾಜು (75) ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಇವರ ಮೇಲಿನ ದಾಳಿ ತಡೆಯಲು ಯತ್ನಿಸಿದ ರಾಜು ಪುತ್ರ ಹಾಗೂ ಚೇತನ್ ತಂದೆ ಮಧು ಅವರಿಗೂ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಲಿ ದಾಳಿಯಿಂದ ಆಕ್ರೋಶಗೊಂಡಿರುವ ಕೃಷಿ ಕಾರ್ಮಿಕರು ಘಟನಾಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಸಹ ಸ್ಥಳದತ್ತ ಹೊರಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗೆ ಮುಂದಾಗಿದ್ದಾರೆ.