ನಾಪೋಕ್ಲು: ಸಮೀಪದ ಕೊಟ್ಟ ಮುಡಿಯಲ್ಲಿ ಹಸುವಿನ ಕಳೇಬರ ಪತ್ತೆಯಾಗಿದ್ದು ಚಿರತೆ ದಾಳಿಯಿಂದ ಹಸು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಕೊಟ್ಟ ಮುಡಿಯ ಕಾಳಪ್ಪ ಮಾಡು ಎಂಬಲ್ಲಿರುವ ಯುಸೂಫ್ ಹಾಜಿ ಎಂಬವರ ದನದ ಕೊಟ್ಟಿಗೆಯಲ್ಲಿ ಒಂದು ವಾರದಿಂದ ನಾಲ್ಕು ಹಸುಗಳು ಕಾಣೆಯಾಗಿವೆ.
ಹಸುಗಳ ಪತ್ತೆಗಾಗಿ ತೆರಳಿದ ಯುಸೂಫ್ ಚಿರತೆಯ ಹೆಜ್ಜೆ ಗುರುತುಗಳನ್ನು ಕಾವೇರಿ ನದಿ ತಟದಲ್ಲಿ ಗಮನಿಸಿದ್ದಾರೆ. ಒಂದು ಹಸುವಿನ ಕಳೇಬರ ಪತ್ತೆಯಾಗಿದೆ. ಮೇಯಲು ತೆರಳಿದ್ದ ಮತ್ತೊಂದು ಹಸುವಿನ ಶರೀರದಲ್ಲಿ ಗಾಯಗಳಾಗಿದ್ದು ಚಿರತೆ ದಾಳಿಯಿಂದ ಆಗಿರಬಹುದು ಎಂದು ಶಂಕಿಸಲಾಗಿದೆ.
ಸಮೀಪದಲ್ಲಿ ದೇವರ ಕಾಡಿದ್ದು ಅಲ್ಲಿಂದ ಚಿರತೆ ನಾಡಿನ ಕಡೆಗೆ ಬಂದಿರಬಹುದು ಎಂದು ಶಂಕೆ ಗ್ರಾಮಸ್ಥರಲ್ಲಿ ಮೂಡಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಗಾಯಗೊಂಡ ಹಸುವಿಗೆ ಪಶು ಇಲಾಖೆಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.