ಕುಶಾಲನಗರ: ಧರ್ಮದ ತಳಹದಿಯಿಂದ ಮಾತ್ರ ಮನುಷ್ಯನಿಗೆ ಆಂತರಿಕವಾದ ಸುಖ, ಶಾಂತಿ ಹಾಗೂ ಮಾನಸಿಕ ನೆಮ್ಮದಿ ದೊರಕಲು ಸಾಧ್ಯ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶರಣ ಅಂಬಿಗರ ಚೌಡಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುವರ್ಣ ಸಂದರ್ಭ 12ನೇ ಶತಮಾನದಲ್ಲಿ ವಚನಕಾರರು ಮಾಡಿದ ಚಳವಳಿ ಸಾರ್ವಕಾಲಿಕವಾದುದು. ವಚನಕಾರರು ನಡೆದಂತೆ ನುಡಿದರು. ನುಡಿದಂತೆ ನಡೆದರು ಎಂದರು. ಸಮಾಜದಲ್ಲಿದ್ದ ಮೌಢ್ಯ ಹಾಗೂ ಕಂದಾಚಾರಗಳ ವಿರುದ್ಧ ಅಂಬಿಗರ ಚೌಡಯ್ಯ ಕಟು ಶಬ್ದಗಳ ಮೂಲಕ ವಚನಗಳನ್ನು ಬರೆದು ಬಹು ದೊಡ್ಡ ಚಳವಳಿಯನ್ನು ಮಾಡಿದ್ದರ ಬಗ್ಗೆ ಶ್ರೀಗಳು ವಿವರಿಸಿದರು. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ ಮೊದಲಾದ ಶರಣರು ಹಾಕಿ ಕೊಟ್ಟ ಧರ್ಮದ ತಳಹದಿಯನ್ನು ಕಡೆಗಣಿಸಿದ್ದರಿಂದಲೇ ಸಮಾಜದಲ್ಲಿ ಎಲ್ಲೆಡೆ ಅಶಾಂತಿ, ಅತೃಪ್ತಿ, ಭಯೋತ್ಪಾದಕತೆ, ಕಳ್ಳತನ, ಮೋಸ, ದರೋಡೆ ಗಳು ಹೆಚ್ಚುತ್ತಿವೆ ಎಂದು ಸದಾಶಿವ ಶ್ರೀಗಳು ವಿಷಾದಿಸಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ವಚನಕಾರ ವಚನಗಳ ಸಾರಗಳನ್ನು, ಶರಣರ ವಿಚಾರಗಳನ್ನು ಎಳೆಯ ಮಕ್ಕಳ ಮನಸಲ್ಲಿ ಬಿತ್ತುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನಿಜ ಶರಣ ಮಡಿವಾಳ ಮಾಚಯ್ಯ ಅವರ ಜೀವನ ಹಾಗೂ ಸಾಧನೆಗಳ ಕುರಿತು ಪ್ರವಚನ ನೀಡಿದ ಕವಯತ್ರಿ ರಾಣಿ ವಸಂತ್, ವಚನಕಾರರ ಪೈಕಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ ನಿಜ ಶರಣ ಅಂಬಿಗರ ಚೌಡಯ್ಯ ನಿಷ್ಠುರ ವಚನಗಳಿಂದ ಸಮಾಜವನ್ನು ಜಾಗೃತಗೊಳಿಸಿದ್ದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಶರಣರು ರಚಿಸಿದ ವಚನಗಳನ್ನು ನಿತ್ಯವೂ ಪಠಿಸಿ, ಅವುಗಳ ಸಾರವನ್ನು ಅರಿಯಬೇಕು ಎಂದರು.
ಕುಶಾಲನಗರದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಶ್ರೀಕಾಂತ್ ಮಾತನಾಡಿ, ವಚನಕಾರರಲ್ಲಿ ಕಾಯಕ ಪ್ರಜ್ಞೆ ಪ್ರಮುಖವಾಗಿತ್ತು ಎಂದು ವಚನಕಾರರ ಉದ್ದೇಶಗಳನ್ನು ವಿಶ್ಲೇಷಿಸಿದರು. ಅವಿಭಜಿತ ಕುಟುಂಬಗಳ ಕಣ್ಮರೆಯಿಂದಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕಾಣುತ್ತಿಲ್ಲ ಎಂದು ವಿಷಾದಿಸಿದರು.
ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಬ್ಬಾಲೆ ದಿನೇಶ್, ಶಿಕ್ಷಕ ಸಿ.ಪಿ.ಮಂಜು ಕೊಡ್ಲಿಪೇಟೆ ಸೋಮಶೇಖರ ಶಾಸ್ತ್ರಿ ಇದ್ದರು.ವಿದ್ಯಾರ್ಥಿಗಳಿಂದ ಅಂಬಿಗರ ಚೌಡಯ್ಯ ಅವರ ವಚನಗಳ ಗಾಯನ ನಡೆಯಿತು.ವಿದ್ಯಾರ್ಥಿನಿ ನವ್ಯ ಸ್ವಾಗತಿಸಿ ಶ್ರಾವ್ಯ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.