ಮಡಿಕೇರಿ: ಕೊಡಗು ಜಿಲ್ಲೆಯ ಕೆಲವೆಡೆ ಶನಿವಾರ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಂಪಾಜೆ, ಕರಿಕೆ, ಚೆಂಬು, ಪೆರಾಜೆ ಭಾಗದಲ್ಲಿ ಬೆಳಿಗ್ಗೆ 9.10 ರಲ್ಲಿ ಸುಮಾರು 3 ಸೆಕೆಂಡ್ ಗಳ ಕಂಪನದ ಅನುಭವ ಆಗಿದೆ ಎಂದು ಸ್ಥಳೀಯರು ಇಲ್ಲಿನ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ನೆಲದೊಳಗಿಂದ ವಿಚಿತ್ರವಾದ ಶಬ್ದವೂ ಬಂದಿದೆ ಎನ್ನಲಾಗಿದೆ.
ಘಟನೆ ಕುರಿತು ಪರಿಶೀಲನೆಗಾಗಿ ಕಂದಾಯ ಇಲಾಖೆಯ ತಂಡವು ಸ್ಥಳಕ್ಕೆ ತೆರಳಿದೆ.
ಈ ಕುರಿತು ಪ್ರಜಾವಾಣಿ ಗೆ ಪ್ರತಿಕ್ರಿಯಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ತಜ್ಞ ಅನನ್ಯ ವಾಸುದೇವ್, 'ಭೂಕಂಪ ಆಗಿರುವ ಕುರಿತು ಇನ್ನೂ ದೃಢಪಟ್ಟಿಲ್ಲ. ಭೂಮಿ ಕಂಪಿಸಿದೆ ಎಂದು ಜನರು ಮಾಹಿತಿ ನೀಡಿದ್ದಾರೆ. ರಿಕ್ಟರ್ ಮಾಪಕದ ಮಾಹಿತಿಯನ್ನು ವಿಶ್ಲೇಷಿಸಲಾಗುತ್ತಿದೆ' ಎಂದು ತಿಳಿಸಿದರು.