ಸಿದ್ದಾಪುರ: ಬುದ್ಧಿಮಾಂದ್ಯ ಮಗನಿಗೆ ಪೋಷಕರೇ ಕಾಲಿಗೆ ಸರಪಳಿ ಕಟ್ಟಿ ಆರೈಕೆ ಮಾಡುತ್ತಿದ್ದಾರೆ. ಕಾಡಿನಂಚಿನ ಅವರೆಗುಂದ ಗ್ರಾಮದ ಎಚ್.ಪಿ.ಹರೀಶ, ಲೀಲಾವತಿ ದಂಪತಿ ಮೂವರು ಮಕ್ಕಳಲ್ಲಿ ಕೊನೆಯವನಾದ ಪ್ರವೀಣ (13) ಹೀಗೆ ಬಂದಿಯಾಗಿ ಬಾಲ್ಯ ಕಳೆಯುತ್ತಿರುವ ಬಾಲಕ.
‘ಮುಕ್ತವಾಗಿ ಬಿಟ್ಟರೆ ಕಾಡಿಗೆ ಹೋಗಿ ಸೊಪ್ಪು, ಎಲೆ ತಿನ್ನಲು ಪ್ರಾರಂಭಿಸುತ್ತಾನೆ. ವನ್ಯಮೃಗಗಳಿಗೆ ಸಿಕ್ಕಿಬೀಳುವ ಆತಂಕ ನಮ್ಮದು. ಅನಿವಾರ್ಯವಾಗಿ ಕಟ್ಟಿ ಹಾಕಬೇಕಾದ ಸ್ಥಿತಿ ನಿರ್ಮರ್ಣವಾಗಿದೆ’ ಎನ್ನುತ್ತಾರೆ ಪೋಷಕರು.
‘ಬುದ್ಧಿಮಾಂದ್ಯನಾದ ಈತ ಬಟ್ಟೆ ತೊಡಿಸಿದರೂ ಕಳಚಿ ಬೆತ್ತಲೆ ಇರುತ್ತಾನೆ. ಬಟ್ಟೆ ಕಿತ್ತೊಗೆಯುತ್ತಾನೆ. ಸರಿಯಾಗಿ ಆಹಾರ ಸೇವಿಸುತ್ತಿಲ್ಲ. ಕಟ್ಟಿಹಾಕುವುದು ನಮಗೂ ಹಿಂಸೆಯೇ. ಆದರೂ, ಸಮಸ್ಯೆಯಾಗಬಾರದು ಎಂದು ಕಟ್ಟಿ ಸಾಕಬೇಕಾದ ಸ್ಥಿತಿ ಇದೆ’ ಎಂದು ಪೋಷಕರು ಕಣ್ಣೀರು ಹಾಕುತ್ತಾರೆ.
ಮಗನ ಆರೋಗ್ಯ ಚಿಕಿತ್ಸೆಗೆ ನೆರವಾಗುವಂತೆ ಕೋರಿ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೂ ಮನವಿ ಮಾಡಿದ್ದೆವು. ಆದರೆ ಸ್ಪಂದಿಸಲಿಲ್ಲ. ಸರ್ಕಾರ ಕೂಡ ತಮ್ಮ ಪಾಲಿಗೆ ಇಲ್ಲ ಎಂದು ಹರೀಶ ನೋವು ತೋಡಿಕೊಳ್ಳುತ್ತಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆಲ ವರ್ಷಗಳ ಹಿಂದೆ ಭೇಟಿ ನೀಡಿದ್ದರು. ಆದರೆ, ಇದುವರೆಗೂ ಸಹಾಯ ದೊರಕಲಿಲ್ಲ ಎಂದರು.