ಸುಂಟಿಕೊಪ್ಪ: ಕೀಟಲೆ, ಕಿರುಚಾಟ, ಚೇಷ್ಟೆ, ಆತ್ಮೀಯತೆಯ ಅಪ್ಪುಗೆಯೊಂದಿಗೆ ಹಳೆಯ ನೆನೆಪು ಮೆಲುಕು ಹಾಕಿದ ವಿದ್ಯಾರ್ಥಿಗಳು. ಪ್ರೀತಿಯ ಗುರುಗಳ ಆಶೀರ್ವಾದ ಪಡೆದಾಗ ಆನಂಧಭಾಷ್ಪ...ಇವೆಲ್ಲವೂ ಸುಂಟಿಕೊಪ್ಪದ ಪ್ರಾಥಮಿಕ ಶಾಲೆಯಲ್ಲಿ ಕಂಡುಬಂದ ಸನ್ನಿವೇಶಗಳು.
ಇಲ್ಲಿನ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ 1980ರ ಸಾಲಿನ ಹಳೆಯ ವಿದ್ಯಾರ್ಥಿಗಳ ಹಳೆಯ ನೆನಪುಗಳ 'ಬಾಲಂಗೋಚಿ' ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.
ಮೊದಲಿಗೆ ಕಾರ್ಯಕ್ರಮಕ್ಕೆ ತುಮಕೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ನಿವೃತ್ತ ಶಿಕ್ಷಕಿ ವಸಂತಿ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಬರಮಾಡಿಕೊಂಡ ರೀತಿ ಗುರುವಿನ ಕಣ್ಣಿನಲ್ಲಿ ಆನಂಧ ಭಾಷ್ಪವೇ ಸುರಿಯಿತು.
ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಸಂತಿ ಅವರು, ‘ಮಕ್ಕಳಿಗೆ ವಿದ್ಯೆ, ಸಂಸ್ಕಾರ ಕಲಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವ ಪ್ರತಿಯೊಬ್ಬರೂ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ’ ಎಂದರು.
‘ನನ್ನ ಜೀವನದ ಈ ಕ್ಷಣ ಅತ್ಯಂತ ಅವಿಸ್ಮರಣೀಯವಾದದ್ದು. ನಿವೃತ್ತ ಆಗಿ 20 ವರ್ಷ ಕಳೆದರೂ ನನ್ನನ್ನು ಪ್ರೀತಿಯಿಂದ ಕರೆಸಿ ಹಳೆಯ ನೆನಪು ಮರುಕಳಿಸುವಂತೆ ಮಾಡಿದಿರಿ’ ಎಂದಾಗ ಕಣ್ಣಿನಂಚಿನಲ್ಲಿ ನೀರು ಹರಿಯಿತು. ‘ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಕರ್ತವ್ಯವಾದರೂ ಅವರನ್ನು ತಿದ್ದಿ ತೀಡಿ ಬೆಳೆಸುವುದು ಸಾಮಾನ್ಯ ಕೆಲಸವಲ್ಲ’ ಎಂದರು.
ಈ ಶಾಲೆಯ ಮುಖ್ಯೋಪಾದ್ಯಾಯಿನಿ ಮೀರಾ ಡಿಸೋಜ ಮಾತನಾಡಿ, ‘ಹಳೆಯ ವಿದ್ಯಾರ್ಥಿಗಳು ಈ ಶಾಲೆಯ ಮೇಲಿನ ಅಭಿಮಾನದಿಂದ ಹಾಗೂ ಶಿಕ್ಷಕರ ಮೇಲಿನ ಗೌರವದಿಂದ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಿ ಸಂತಸ ಹಂಚಿಕೊಂಡಿರುವುದು ಶಾಲೆಗೆ ಮತ್ತಷ್ಟು ಬಲ ಬಂದಂತಾಗಿದೆ’ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿ ಬಿ.ಬಿ.ಭಾರತೀಶ್ ಮಾತನಾಡಿ, ‘ವಿದ್ಯೆ ಕಲಿಸಿದ ಗುರುಗಳಿಗೆ ಹಾಗೂ ಈ ಶಾಲೆಗೆ ಚಿರಾಋಣಿಯಾಗಿದ್ದೇವೆ. ಈ ವಿದ್ಯಾ ದೇಗುಲದಿಂದ ದೊರೆತಿರುವ ಜ್ಞಾನ ಮತ್ತು ಸಂಸ್ಕಾರದಿಂದ ಮೇಲ್ಮಟ್ಟಕ್ಕೆ ಏರಿದ್ದೇವೆ. ಇದಕ್ಕೆಲ್ಲಾ ಗುರುಗಳು ಹಾಕಿಕೊಟ್ಟ ಅಡಿಪಾಯ’ ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕರಾದ ವಸಂತಿ, ಸಿಸ್ಟರ್ ವೈಲೆಟ್ ಮೆನೆಜಸ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ವೀರಾ ಡಿಸೋಜ ಅವರನ್ನು ಶಾಲು ಹೊದಿಸಿ, ಫಲ ತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ನಂತರ ತಮ್ಮ ಸಹಪಾಠಿಗಳು ವಿವಿಧ ರೀತಿಯ ಮನರಂಜನೆಯ ಆಟ ಆಡುವ ಮೂಲಕ ಸಂಭ್ರಮಿಸಿದರು.
ಹಳೆಯ ವಿದ್ಯಾರ್ಥಿಗಳಾದ ಫೆಲ್ಸಿ, ಮಾಗ್ದಲಿನ್, ಶೋಭವತಿ, ಸಮ್ಮದ್, ಗ್ಯಾಬ್ರಿಯಲ್ ಡಿಸೋಜ, ವಿಜಯ ಕುಮಾರ್, ಶಿವಪ್ಪ, ಬಿ.ಕೆ.ಪ್ರಶಾಂತ್, ವಾಸುದೇವ, ಶ್ರೀನಿವಾಸ್ ಸೇರಿದಂತೆ 30ಕ್ಕೂ ಹೆಚ್ಚಿನ ಆ ವರ್ಷದ ಸಹಪಾಠಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.