ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಹು ಸಾಂಬಾರ ಬೆಳೆ ಪ್ರಗತಿಗೆ ಹಾದಿ’

ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ.ಅಂಕೇಗೌಡ ಸಲಹೆ
Last Updated 15 ಜೂನ್ 2022, 5:04 IST
ಅಕ್ಷರ ಗಾತ್ರ

ಮಡಿಕೇರಿ: ರೈತರು ಕೇವಲ ಒಂದೇ ವಿಧದ ಸಾಂಬಾರ ಬೆಳೆಯನ್ನು ನೆಚ್ಚಿ ಕೊಳ್ಳದೇ ಬಹುವಿಧದ ಬೆಳೆ ಬೆಳೆಯುವ ಮೂಲಕ ನಷ್ಟದಿಂದ ‍ಪಾರಾಗಬಹುದು ಎಂದು ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆಯ ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ.ಎಸ್.ಜೆ.ಅಂಕೇಗೌಡ ಸಲಹೆ ನೀಡಿದರು.

ಕೇಂದ್ರದ ಸಭಾಂಗಣದಲ್ಲಿ ಸಾಂಬಾರ ಬೆಳೆ ಅಭಿವೃದ್ಧಿ ಕುರಿತು ರೈತರಿಗೆ ಮಂಗಳವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಸಾಂಬಾರ ಬೆಳೆ ಬೆಳೆಯಲು ಹೆಚ್ಚಿನ ಉತ್ತೇಜನ ನೀಡುತ್ತಿದೆ. ಆ ನಿಟ್ಟಿನಲ್ಲಿ ಕಾಫಿ ಬೆಳೆ ಜೊತೆಗೆ ಕರಿಮೆಣಸು, ಏಲಕ್ಕಿ ಸೇರಿದಂತೆ ಬಹು ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬಹುದು ಎಂದರು.
ಸಾಂಬಾರ ಬೆಳೆಗಳಲ್ಲಿ ಏಲಕ್ಕಿ, ಕರಿಮೆಣಸು ಪ್ರಮುಖ. ಕಾಫಿ ಜೊತೆಗೆ ಕರಿಮೆಣಸನ್ನು ಬಹು ಬೆಳೆಯಾಗಿ ಬೆಳೆಯುತ್ತಿದ್ದು, ಇತ್ತೀಚಿನ ದಿನಗ ಳಲ್ಲಿ ಕರಿಮೆಣಸು ಮತ್ತು ಅಡಿಕೆಗೆ ಉತ್ತಮ ಬೆಲೆಯಿದೆ. ಏಲಕ್ಕಿಗೆ ಸಾಧಾ ರಣ ಬೆಲೆ ಇದೆ. ಹಾಗಾಗಿ, ಬಹು ಬೆಳೆ ಬೆಳೆಯುವಂತಾಗ ಬೇಕು ಎಂದು ಹೇಳಿದರು.

ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರದಿಂದ 10 ಸಾವಿರ ಏಲಕ್ಕಿ ಗಿಡಗಳನ್ನು ವಿತರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಸಹ ರೈತರು ಏಲಕ್ಕಿ ಬೆಳೆ ಬೆಳೆಯಲು ಮುಂದಾಗುತ್ತಿದ್ದು, ಸಂಶೋಧನಾ ಸಂಸ್ಥೆಯಿಂದ ಗಿಡಗಳನ್ನು ಪಡೆಯುತ್ತಿದ್ದಾರೆ ಎಂದರು.

ಕೃಷಿಕರು ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಸೌಲಭ್ಯಗಳನ್ನು ಪಡೆದು, ಇನ್ನೂ ವೈಜ್ಞಾನಿಕವಾಗಿ ಸಾಂಬಾರ ಬೆಳೆಗಳನ್ನು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಕಾಫಿ ತೋಟದಲ್ಲಿ ಕಾಳುಮೆಣಸು ಗಿಡವನ್ನು ಹೆಚ್ಚು ನೆಡಬೇಕು. ಕೊಡಗು ಜಿಲ್ಲೆಯ ತೋಟಗಳಲ್ಲಿ ಕಾಳುಮೆಣಸು ಇಳುವರಿ ಉತ್ತಮವಾಗಿದ್ದು, ಗಿಡದ ಬೆಳವಣಿಗೆ ಗಮನಿಸಬೇಕು. ಬೇರು ಕೊಳೆರೋಗ ಬರದಂತೆ ನಿಯಂತ್ರಣ ಮಾಡಬೇಕು ಎಂದರು.

ಕರಿಮೆಣಸಿನಲ್ಲಿ ಪಣಿಯೂರು, ಶುಭಕರ, ಶ್ರೀಕರ, ಪಂಚಮಿ, ಪೌರ್ಣಮಿ, ಅರ್ಕಕೂರ್ಗ್ ಎಕ್ಸಲ್, ವಿಜಯ್, ಮಲಬಾರ್ ಎಕ್ಸೆಲ್ ಹೀಗೆ ಹಲವು ವಿವಿಧ ಕರಿಮೆಣಸು ಸುಧಾರಿತ ತಳಿಗಳು ಇವೆ ಎಂದು ಮಾಹಿತಿ ನೀಡಿದರು.

ಕರಿಮೆಣಸು ಬೆಳೆಗೆ ಸಂಬಂಧಿಸಿ ದಂತೆ ಸಸ್ಯ ಅಭಿವೃದ್ಧಿ, ಸಾಂಪ್ರದಾಯಿಕ ವಿಧಾನ, ಸರ್‍ಪಂಟೈನ್ ವಿಧಾನ, ಕರಿಮೆಣಸು ನರ್ಸರಿ ರೋಗಗಳ ನಿಯಂತ್ರಣ, ಪ್ರಮುಖವಾಗಿ ಎಲೆಚುಕ್ಕಿ ರೋಗ, ಬೇರುಗಂಟು ರೋಗ, ತೋಟದ ನಿರ್ವಹಣೆ, ನಾಟಿ ಕ್ರಮ, ನೀರಾವರಿ, ಶೀಘ್ರ ಸೊರಗು ರೋಗ ನಿಯಂತ್ರಣ, ಹತೋಟಿಗೆ ಕ್ರಮಗಳು, ಕೀಟಗಳ ನಿಯಂತ್ರಣ, ಕೊಯ್ಲೋತ್ತರ ಪ್ರಕ್ರಿಯೆಗಳನ್ನು ಅವರು ವಿವರಿಸಿದರು.

ಏಲಕ್ಕಿಗೆ ಸಂಬಂಧಿಸಿದಂತೆ ಕಂದುಗಳ ಮೂಲಕ ಸಸ್ಯ ಅಭಿವೃದ್ಧಿ, ಪ್ರಾಥಮಿಕ ಸಸಿ ಮಡಿ ಹಾಗೂ ನಿರ್ವಹಣೆ, ರಸಗೊಬ್ಬರ ಬಳಕೆ, ಕಾಂಡ ಬೀಜ ಕೋಶ ಕೊರೆಯುವ ಹುಳು, ಬೇರುಕಾಂಡ ಕೊಳೆರೋಗ, ಕಟ್ಟೆರೋಗ, ಕೊಕ್ಕೆಕಂದು ರೋಗ, ವೈರಸ್ ರೋಗ ನಿರ್ವಹಣೆ, ಕೊಯ್ಲು ಮತ್ತು ಕೊಯ್ಲೋತ್ತರ ತಾಂತ್ರಿಕತೆ ಬಗ್ಗೆ ವಿವರಿಸಿದರು.

ಕಾಫಿ ಜಾಗೃತಿ ಮಂಡಳಿ ಮಹಿಳಾ ವಿಭಾಗದ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಜೇನುಕೃಷಿ ಕುರಿತು ರಜಿನಿಮಣಿ ಅವರು ಕಿರುಚಿತ್ರ ಪ್ರದರ್ಶಿಸಿದರು. ಬೆಳೆಗಾರರಾದ ಬೋಸ್ ಮಂದಣ್ಣ, ಜ್ಯೋತಿಕಾ ಬೋಪಣ್ಣ, ಅನಿತಾ ನಂದಾ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT