ಸೋಮವಾರಪೇಟೆ: ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಹಾಗೂ 53 ಕಾರ್ಯಕರ್ತರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿರುವ ತಾಲ್ಲೂಕು ಘಟಕದ ಕಾರ್ಯಕರ್ತರು, ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಬೇಕು, ಎಲ್ಲ ಮೊಕದ್ದಮೆಗಳನ್ನು ರದ್ದುಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಮನವಿ ಸಲ್ಲಿಸಿದರು.
ಈಚೆಗೆ ನಡೆದ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲನೇ ಟೋಲ್ ದಾಸಹಳ್ಳಿಯಿಂದ ಕಬ್ಬನ್ ಪಾರ್ಕ್ ವರೆಗೆ ಕನ್ನಡದ ನಾಮಫಲಕ ಕನ್ನಡ ಅಭಿಯಾನ ಪ್ರತಿಭಟನೆ ಮೆರವಣಿಗೆ ನಡೆಸುತ್ತೇವೆಂದು ಸರ್ಕಾರಕ್ಕೆ ತಿಳಿಸಲಾಗಿತ್ತು. ಮೆರವಣಿಗೆಗೆ ಅವಕಾಶ ನೀಡದ ಕಾರಣ ಕರವೇ ಕಾರ್ಯಕರ್ತರು ಆಕ್ರೋಶಗೊಂಡು, ಕೆಲವೆಡೆ ಅಂಗಡಿ ಮುಂಗಟ್ಟುಗಳ ಇಂಗ್ಲಿಷ್ ಫಲಕಗಳಿಗೆ ಮಸಿ ಬಳಿದು ತೆರವುಗೊಳಿಸುವ ಸಂದರ್ಭ ಬಂಧಿಸಲಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಕಾವಲು ಸಮಿತಿ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಕನ್ನಡದ ಪರವಾಗಿ ಕೆಲಸ ಮಾಡುತ್ತಿಲ್ಲ. ಇಂಥ ನಿಗಮಗಳನ್ನು ವಿಸರ್ಜಿಸಬೇಕು ಎಂದು ಕರವೇ ಒತ್ತಾಯಿಸಿತು.
ರಾಜ್ಯ ಸರ್ಕಾರವೇ ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಶೇ 60ರಷ್ಟು ಕನ್ನಡದಲ್ಲಿ ಇರಬೇಕೆಂದು ಆದೇಶ ಮಾಡಿದೆ. ಸರಿಯಾದ ಕ್ರಮ ಕೈಗೊಳ್ಳದೆ ಇರುವುದರಿಂದ, ಸರ್ಕಾರ ಮಾಡಬೇಕಾದ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದೆ. ಕನ್ನಡಿಗರ ಸರ್ಕಾರ ಎಂದಿರುವ ರಾಜ್ಯ ಸರ್ಕಾರ, ಕನ್ನಡ ಪರವಾಗಿ ನಿಲುವುಗಳನ್ನು ಪ್ರಕಟಿಸುತ್ತೇವೆಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡಪರ ಹೋರಾಟಗಾರರ ಪ್ರಕರಣಗಳನ್ನು ವಾಪಸ್ ಪಡೆಯಬೇಕೆಂದು ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಒತ್ತಾಯಿಸಿದರು.
ಮನವಿ ಪತ್ರವನ್ನು ತಾಲ್ಲೂಕು ಕಚೇರಿ ಶಿರಸ್ತೇದಾರ್ ಸುಶೀಲ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ನಗರ ಘಟಕದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಬಿ.ಎಂ. ದಾಮೋಧರ್, ಕಲ್ಕಂದೂರು ರಮೇಶ್, ಸುಮತಿ, ಶಶಿ ಹಾನಗಲ್ಲು, ನಂದಕುಮಾರ್, ದೇವೇಂದ್ರ ಭಾಗವಹಿಸಿದ್ದರು.