ಮಡಿಕೇರಿ: ರಾಜ್ಯ ಹಣಕಾಸು ಸಂಸ್ಥೆಯು 2023-24ನೇ ಸಾಲಿನಲ್ಲಿ ₹ 1,100 ಕೋಟಿ ಮೊತ್ತದ ಸಾಲ ಮಂಜೂರಾತಿ ಗುರಿ ಇರಿಸಿಕೊಂಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಏಕರೂಪ್ ಕೌರ್ ತಿಳಿಸಿದರು.
ಸಂಸ್ಥೆಯಲ್ಲಿ ಈಚೆಗೆ ನಡೆದ 64ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಸಂಸ್ಥೆಯ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದರು.
ಗುಣಮಟ್ಟದ ಉದ್ಯಮಗಳಿಗೆ ಹಣಕಾಸು ನೆರವು ನೀಡಿ ಆರ್ಥಿಕ ಅಭಿವೃದ್ಧಿಯ ಯೋಜನೆಯ ಹೊಂದಿದೆ. 2023-24ರ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ, ಮಹಿಳಾ ಉದ್ಯಮಿಗಳಿಗೆ ಹಾಗೂ ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಲಭ್ಯವಿರುವ ಬಡ್ಡಿ, ಸಹಾಯಧನ ಯೋಜನೆಗಳಿಂದ ಮುಂಬರುವ ಹಣಕಾಸು ವರ್ಷದಲ್ಲಿ ಹೆಚ್ಚಿನ ಮಂಜೂರಾತಿ ಹಾಗೂ ವಿತರಣೆಯ ಗುರಿ ಸಾಧಿಸಲಾಗುವುದು ಎಂದರು.
ಜೊತೆಗೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಿದರು.
ಸಂಸ್ಥೆಯು ಪ್ರಸಕ್ತ 2022-23 ನೇ ಸಾಲಿನಲ್ಲಿ ₹ 138.78 ಕೋಟಿ ದಾಖಲೆ ಲಾಭ ಗಳಿಸಿದೆ. ₹ 107.31 ಕೋಟಿಗಳ ತೆರಿಗೆ ನಂತರದ ಲಾಭಗಳಿಸಿದೆ. ವಿವಿಧ ಸಾಲ ಯೋಜನೆಗಳ ಮೂಲಕ ₹ 901.10 ಕೋಟಿ ಸಾಲದ ಮಂಜೂರಾತಿ ಮಾಡಿದ್ದು, ಇದರಲ್ಲಿ 682 ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಘಟಕಗಳಿಗೆ ₹ 874.68 ಕೋಟಿಗಳ ಮೊತ್ತ ಸಾಲ ನೀಡಲಾಗಿದೆ ಎಂದರು.
ಹಿಂದಿನ ಹಣಕಾಸು ವರ್ಷ 2021-22ರಲ್ಲಿ ಶೇ 4.74ರಷ್ಟು ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು ಪ್ರಸಕ್ತ ಹಣಕಾಸು ವರ್ಷ 2022-23ರಲ್ಲಿ ಶೇ 3.51 ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಯೋಜನೆಗಳಲ್ಲಿ, 105 ಮಹಿಳಾ ಉದ್ಯಮಿಗಳಿಗೆ ₹ 131.13 ಕೋಟಿ ಸಾಲ ನೀಡಲಾಗಿದೆ. 2023ರ ಮಾರ್ಚ್ ಅಂತ್ಯದವರೆಗೆ ₹ 1,048.48 ಕೋಟಿ ಸಂಚಿತ ನೆರವನ್ನು 1,357 ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ ಎಂದು ಹೇಳಿದರು ಎಂದು ಪ್ರಕಟಣೆ ತಿಳಿಸಿದೆ.