ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗಿನಲ್ಲಿ ಪ್ರತಿಧ್ವನಿಸಿದ ಪ್ರತಿಭಟನೆಗಳು

ಕೊಡವ ನ್ಯಾಷನಲ್ ಕೌನ್ಸಿಲ್, ಸಿಪಿಐ(ಎಂ), ಟ್ಯಾಕ್ಸಿ ಚಾಲಕರು, ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ
Published 10 ಜೂನ್ 2024, 22:30 IST
Last Updated 10 ಜೂನ್ 2024, 22:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಹಲವೆಡೆ ಪ್ರತಿಭಟನೆಗಳು ನಡೆದವು. ಬೃಹತ್ ತೋಟಗಳ  ಭೂಪರಿವರ್ತನೆ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ಬಾಳೆಲೆಯಲ್ಲಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ) ನೆಲ್ಲಿಹುದಿಕೇರಿಯಲ್ಲಿ, ಟ್ಯಾಕ್ಸಿ ಚಾಲಕರು ಮಡಿಕೇರಿಯಲ್ಲಿ, ಬಿಜೆಪಿ ಕಾರ್ಯಕರ್ತರು ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.

ಕೊಡಗಿನಲ್ಲಿ ನಡೆಯುತ್ತಿರುವ ದೊಡ್ಡ ದೊಡ್ಡ ಕಾಫಿ ತೋಟಗಳ ಭೂಪರಿವರ್ತನೆ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್‌ ಪ್ರತಿಭಟನೆ ಮುಂದುವರಿದಿದೆ. ಸಂಘಟನೆಯ ಸದಸ್ಯರು ಸೋಮವಾರ ಬಾಳೆಲೆ ಗ್ರಾಮದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ, ಭೂಪರಿವರ್ತನೆಯಿಂದಾಗುವ ಅಪಾಯಗಳನ್ನು ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ, ‘ದೊಡ್ಡ ದೊಡ್ಡ ತೋಟಗಳು ಭೂಪರಿವರ್ತನೆಯಾಗಿ ನಿವೇಶನಗಳಾಗಿ ಬದಲಾದರೆ ಕೊಡಗಿನ ಜನರಿಗೆ ಮಾತ್ರವಲ್ಲ, ಇಲ್ಲಿನ ಜಲಮೂಲಗಳಿಗೆ ದೊಡ್ಡ ವಿಪತ್ತು ಕಾದಿದೆ’ ಎಂದು ಎಚ್ಚರಿಕೆ ನೀಡಿದರು.

ದೊಡ್ಡ ದೊಡ್ಡ ತೋಟಗಳು ನಿವೇಶನಗಳಾಗಿ ಬದಲಾದ ನಂತರ, ಅಲ್ಲಿ ಮನೆಗಳು ನಿರ್ಮಾಣಗೊಂಡ ನಂತರ ತೋಟದಲ್ಲಿ ಸರಾಗವಾಗಿ ಹರಿಯುವ ಜಲತೊರೆಗಳು ಕಣ್ಮರೆಯಾಗಲಿವೆ. ಕಾಫಿ ತೋಟಗಳ ಭೂಪರಿವರ್ತನೆಯಿಂದ ಕೊಡಗಿನ ಎಲ್ಲಾ ಗ್ರಾಮಗಳು ನಾಶವಾಗಲಿವೆ ಎಂದೂ ಆತಂಕ ವ್ಯಕ್ತಪಡಿಸಿದರು.

ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಿದಾಗ ಮಾತ್ರ ಪವಿತ್ರ ಕೊಡವ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.

ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆಗಳು ನಿಲ್ಲುವವರೆಗೆ ಸಿಎನ್‍ಸಿ ವತಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಮುಂದಿನ ಪ್ರತಿಭಟನೆ ಜೂನ್ 17ರಂದು ಸಿದ್ದಾಪುರದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಚೇರಂಬಾಣೆ, ಮೂರ್ನಾಡು, ಕಕ್ಕಬೆ, ನಾಪೋಕ್ಲು, ವಿರಾಜಪೇಟೆ, ಗೋಣಿಕೊಪ್ಪ, ತಿತಿಮತಿ, ಪೊನ್ನಂಪೇಟೆ, ಹುದಿಕೇರಿ, ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ ಮತ್ತಿತರೆಡೆ ಕೂಡ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಪೋಡಮಾಡ ಜಾನಕಿ, ಮಾಪಂಗಡ ಯಮುನಾ, ಗಾಂಡಂಗಡ ಪ್ರತಿಮಾ, ಅಡ್ಡೇಂಗಡ ಪೊನ್ನಮ್ಮ, ಅಡ್ಡೇಂಗಡ ಗ್ರೀಷ್ಮಾ ಮಲ್ಚಿರ ಕವಿತಾ ಬೋಜಪ್ಪ, ಮುಕ್ಕಾಟಿರ ಜಾನಕಿ ವಾಸು, ಅರ್ಮಣಮಾಡ ಮಮತಾ, ಕೊಕ್ಕಂಗಡ ಸ್ಮಿತಾ, ಅಡ್ಡೇಂಗಡ ಕಾವೇರಮ್ಮ, ಮಾಪಂಗಡ ಅಶೋಕ್, ಪೋಡಮಾಡ ಗಿರೀಶ್, ಕಾಂಡೇರ ಸುರೇಶ್, ಅಲ್ಮೇಂಗಡ ಬೋಸ್ ಮಂದಣ್ಣ, ಅಲ್ಮೇಂಗಡ ಪೊನ್ನಪ್ಪ, ಮಚ್ಚಮಾಡ ದೊರೆ ಉತ್ತಯ್ಯ, ಮೇಚಂಡ ಕಿಶು, ಚೆಕ್ಕೇರ ಸೂರ್ಯ ಅಯ್ಯಪ್ಪ ಭಾಗವಹಿಸಿದ್ದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ (ಎಂ) ಮುಖಂಡರು ಮತ್ತು ಕಾರ್ಯಕರ್ತರು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ (ಎಂ) ಮುಖಂಡರು ಮತ್ತು ಕಾರ್ಯಕರ್ತರು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ (ಎಂ) ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಬಂದ ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಇತರೆ ಅಧಿಕಾರಿಗಳು ಪ್ರತಿಭಟನಕಾರರೊಂದಿಗೆ ಸಭೆ ನಡೆಸಿ ಬೇಡಿಕೆಗಳ ಕುರಿತು ಚರ್ಚೆ ನಡೆಸಿದರು.
ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ (ಎಂ) ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಬಂದ ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಇತರೆ ಅಧಿಕಾರಿಗಳು ಪ್ರತಿಭಟನಕಾರರೊಂದಿಗೆ ಸಭೆ ನಡೆಸಿ ಬೇಡಿಕೆಗಳ ಕುರಿತು ಚರ್ಚೆ ನಡೆಸಿದರು.

ಒಂದೇ ದಿನ 4 ಕಡೆ ಪ್ರತಿಭಟನೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಸಿಎನ್‌ಸಿಯಿಂದ ಮಾನವ ಸರಪಳಿ ರಚನೆ

ನೆಲ್ಲಿಹುದಿಕೇರಿಯಲ್ಲಿ ಸಿಪಿಐ (ಎಂ) ಆಕ್ರೋಶ ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ (ಎಂ) ಮುಖಂಡರು ಮತ್ತು ಕಾರ್ಯಕರ್ತರು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಇತರೆ ಅಧಿಕಾರಿಗಳು ಪ್ರತಿಭಟನಕಾರರೊಂದಿಗೆ ಸಭೆ ನಡೆಸಿ ಬೇಡಿಕೆಗಳ ಕುರಿತು ಚರ್ಚೆ ನಡೆಸಿದರು. ಮುಖ್ಯವಾಗಿ ಪ್ರತಿಭಟನಕಾರರು ಕೊಡಗು ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಕಡಿಮೆ ದರಕ್ಕೆ ಗುತ್ತಿಗೆ ಆಧಾರದಲ್ಲಿ ನೀಡುವ ಆದೇಶ ಹಿಂಪಡೆಯಬೇಕು ಅಪಾಯಕಾರಿ ಜಾಗದಲ್ಲಿರುವ ಬಡ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂಬ ಬೇಡಿಕೆಗಳನ್ನು ಮಂಡಿಸಿದರು. ಈ ವೇಳೆ ಮಾತನಾಡಿದ ಸಿಪಿಐ(ಎಂ) ಕಾರ್ಯದರ್ಶಿ ಪಿ.ಆರ್.ಭರತ್ ‘ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಬಡ ಕುಟುಂಬಗಳು ಅಪಾಯಕಾರಿ ಸ್ಥಳಗಳಲ್ಲಿ ಜೀವಿಸುತ್ತಿದ್ದಾರೆ. ಅನೇಕ ಮಂದಿ ಲೈನ್‌ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಸರ್ಕಾರ ಕನಿಷ್ಠ ವೇತನ ಹಾಗೂ ಮೂಲಸೌಕರ್ಯಗಳನ್ನು ಒದಗಿಸಿಲ್ಲ ಎಂದು ಕಿಡಿಕಾರಿದರು. 2019ರಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಲು ನಿಗದಿಪಡಿಸಿರುವ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 8.5 ಎಕರೆ ಜಾಗದಲ್ಲಿ ಮೂಲ ಸೌಕರ್ಯ ಒದಗಿಸಬೇಕು ಮನೆ ನಿರ್ಮಿಸಿಕೊಳ್ಳಲು ತಲಾ ₹ 10 ಲಕ್ಷ ನೀಡಬೇಕು ನಿರಾಶ್ರಿತರ ಪಟ್ಟಿಯನ್ನು ಬದಲಾಯಿಸಿ ಹೊಸಪಟ್ಟಿಯನ್ನು ತಯಾರಿಸಬೇಕು ನಿವೇಶನ ಹೊಂದಿರುವ ದಾಖಲಾತಿಗಳಿಲ್ಲದ ಸಾವಿರಾರು ಮನೆಗಳಿದ್ದು 94 ಸಿ ಮೂಲಕ ಹಕ್ಕು ಪತ್ರ ವಿತರಣೆಯಾಗದೆ ಇರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್ ಸದಸ್ಯರಾದ ಎ.ಕೆ.ಚಂದ್ರನ್ ಕೆ.ಶಿವರಾಮನ್ ವೈ.ರವಿ ಬೋಜಿ ಡಿ.ಟಿ.ಉದಯನ್ ಲಲಿತಮ್ಮ ಯೂಸೂಫ್ ಅಬಿಬ್ ಕಾವೇರಿ ಸೌಕತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆಯ ಮನವಿ ಪತ್ರವನ್ನು ತಹಶೀಲ್ದಾರ್ ಕಿರಣ್ ಗೌರಯ್ಯ ಸ್ವೀಕರಿಸಿದರು. ನಂತರ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿವೇಶನದ ಬೇಡಿಕೆ ವಿವಿಧ ಸಮಸ್ಯೆಗಳು ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯ ಕುರಿತು ಚರ್ಚೆ ನಡೆಸಿದರು ಸಭೆಯಲ್ಲಿ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಕಂದಾಯ ಪರಿವೀಕ್ಷಕ ಸಂತೋಷ್ ಅರಣ್ಯ ವಲಯಾಧಿಕಾರಿ ರತನ್ ಅರಣ್ಯಾಧಿಕಾರಿ ಸುಬ್ಬರಾಯ ಪಿಡಿಓ ನಂಜುಂಡಸ್ವಾಮಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಉಪಾಧ್ಯಕ್ಷೆ ಪ್ರಮೀಳಾ ಭಾಗವಹಿಸಿದ್ದರು.

ಬಾಡಿಗೆ ಬೈಕ್‌ಗಳ ವಿರುದ್ಧ ಟ್ಯಾಕ್ಸಿ ಚಾಲಕರ ಆಕ್ರೋಶ ಮಡಿಕೇರಿ: ಬಾಡಿಗೆ ಬೈಕ್‌ಗಳು ತಮ್ಮ ಜೀವನ ಕಸಿಯುತ್ತಿವೆ ಎಂದು ಆರೋಪಿಸಿ ಟ್ಯಾಕ್ಸಿ ಚಾಲಕರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು. ಟ್ಯಾಕ್ಸಿ ಚಾಲಕರ ನಿಲ್ದಾಣದ ಸಮೀಪವೇ ನೂತನವಾಗಿ ಬಾಡಿಗೆ ಬೈಕ್‌ ಮಳಿಗೆ ಆರಂಭಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಚಾಲಕರಿಗೂ ಮಳಿಗೆಯ ಸಿಬ್ಬಂದಿಗೂ ಮಾತಿನ ಚಕಮಕಿ ನಡೆಯಿತು. ತಮಗೆ ನಗರಸಭೆಯಿಂದ ಮಾತ್ರವಲ್ಲ ಸಂಬಂಧಿಸಿದ ಎಲ್ಲ ಇಲಾಖೆಗಳಿಂದಲೂ ನಿರಾಪೇಕ್ಷಣ ಪತ್ರ ದೊರೆತಿದೆ. ತಮ್ಮ ಮಳಿಗೆ ಕಾನೂನುಬದ್ಧವಾಗಿದೆ ಎಂದು ವಾದ ಮಂಡಿಸಿದರು. ಸ್ಥಳಕ್ಕೆ ಬಂದ ಸಬ್‌ಇನ್‌ಸ್ಪೆಕ್ಟರ್‌ ಲೋಕೇಶ್‌ ಪರಿಸ್ಥಿತಿಯನ್ನು ತಿಳಿಗೊಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT