ಮಡಿಕೇರಿ: ಬೆಂಗಳೂರಿನಲ್ಲಿ ಈಚೆಗೆ ಸಂಭವಿಸಿದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಪಟಾಕಿ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಿಲ್ಲಾಧಿಕಾರಿ ವೆಂಕಟ್ರಾಜಾ ಅವರು ಜಾರಿಗೊಳಿಸಿದ್ದಾರೆ. ಜತೆಗೆ, 120 ಡೆಸಿಬಲ್ಗಿಂತ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳ ಮಾರಾಟವನ್ನು ನಿಷೇಧಿಸಿದ್ದಾರೆ.
ಸಿಎಸ್ಆರ್ಐ ಮತ್ತು ಎನ್ಇಇಆರ್ಐ ಸಂಸ್ಥೆಗಳಲ್ಲಿ ನೋಂದಾಯಿಸಿದ ಕಾರ್ಖಾನೆಗಳು ತಯಾರಿಸಿದ ಹಸಿರು ಪಟಾಕಿಗಳನ್ನಷ್ಟೇ ಮಾರಾಟ ಮಾಡಬೇಕು ಎಂದು ಷರತ್ತು ವಿಧಿಸಿದ್ದಾರೆ.
ಪಟಾಕಿ ಮಳಿಗೆಗಳ ನಡುವೆ ಕನಿಷ್ಠ 6 ಮೀಟರ್ ಅಂತರವಿರಬೇಕು, ಮಳಿಗೆಗಳ ವಿಸ್ತೀರ್ಣ 5x5 ಅಡಿ ಮೀರುವಂತಿಲ್ಲ, ಪಟಾಕಿಗಳನ್ನು ಅಂಗಡಿಗಳ ಮುಂಭಾಗ ಹಚ್ಚಿ ಪ್ರದರ್ಶಿಸುವಂತಿಲ್ಲ ಎಂದು ಸೂಚಿಸಿದ್ದಾರೆ.
ನೀರು, ಮರಳು ಹಾಗೂ ಉತ್ತಮ ಸ್ಥಿತಿಯಲ್ಲಿರುವ ಅಗ್ನಿನಂದಕಗಳನ್ನು ಪಟಾಕಿ ಮಳಿಗೆ ಬಳಿ ಇರಿಸಿರಬೇಕು, ಅನುಮತಿ ಪತ್ರವನ್ನು ಪಟಾಕಿ ಮಾರಾಟ ಮಳಿಗೆಯಲ್ಲಿ ಪ್ರದರ್ಶಿಸಬೇಕು ಎಂದು ಅವರು ಹೇಳಿದ್ದಾರೆ.
ನ. 11ರಿಂದ 14ರವರೆಗೆ ಮಾತ್ರ ತೆರೆದ ಮೈದಾನದಲ್ಲಿ ಪಟಾಕಿ ಮಾರಾಟ ಮಾಡಲು ಅನುಮತಿ ಪತ್ರ ನೀಡಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.