ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ದಂಪತಿಯೇ ಒಟ್ಟಾಗಿ ಬರೆದ ಪುಸ್ತಕ ಲೋಕಾರ್ಪಣೆ

Published 29 ಮೇ 2024, 6:29 IST
Last Updated 29 ಮೇ 2024, 6:29 IST
ಅಕ್ಷರ ಗಾತ್ರ

ಮಡಿಕೇರಿ: ದಂಪತಿಯೇ ಒಟ್ಟಾಗಿ ಬರೆದ ಪುಸ್ತಕವೊಂದು ಇಲ್ಲಿನ ಪತ್ರಿಕಾಭವನದಲ್ಲಿ ಬುಧವಾರ ಲೋಕಾರ್ಪಣೆಗೊಂಡಿತು.

ಕೊಡವ ಮಕ್ಕಡ ಕೂಟವು ಸತತ 2ನೇ ದಿನವಾದ ಮಂಗಳವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ  ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ ಹಾಗೂ ಅವರ ಪತ್ನಿ ರಾಣು ಅಪ್ಪಣ್ಣ ಅವರು ಬರೆದ ‘ಅಲಾಸ್ಕ’ ಪ್ರವಾಸ ಕಥನ  ಪುಸ್ತಕವು ಬಿಡುಗಡೆಯಾಗಿದ್ದು ವಿಶೇಷ ಎನಿಸಿತ್ತು.

ಅಪ್ಪಣ್ಣ ದಂಪತಿ 3 ಬಾರಿ ಅಮೆರಿಕಾ, ಕೆನಡಾ ದೇಶಕ್ಕೂ, ಯೂರೋಪ್ ಖಂಡದ 14 ದೇಶಗಳಿಗೂ ಅಧ್ಯಯನ ಪ್ರವಾಸ ಮಾಡಿದ್ದಾರೆ. ಈ ವೇಳೆ ತಾವು ಕಂಡುಂಡ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.

ಈ ವೇಳೆ ಮಾತನಾಡಿದ ಬಾಚರಣಿಯಂಡ ಪಿ.ಅಪ್ಪಣ್ಣ, ‘2015ರಲ್ಲಿ ಯು.ಎಸ್.ಎ ಯ ಪ್ರತ್ಯೇಕವಾದ ಭೂ ಸ್ವರೂಪ ಮತ್ತು ವಿಶಿಷ್ಟ ಸಂಸ್ಕೃತಿಯ ಮೂಲನಿವಾಸಿಗಳನ್ನು ಹೊಂದಿರುವ ಅಲಾಸ್ಕ ಪ್ರದೇಶವನ್ನು ಅಧ್ಯಯನ ಮಾಡಿ ದಿನಚರಿಯನ್ನಾಗಿಸಲಾಯಿತು. ಇದನ್ನು ಆಧರಿಸಿ ಪುಸ್ತಕ ಬರೆಯುತ್ತಿದ್ದ ವೇಳೆ ನಮ್ಮನ್ನು ಅಲಾಸ್ಕಕ್ಕೆ ಕರೆದೊಯ್ದ ಅಳಿಯ ಜಮ್ಮಡ ಸೋಮಯ್ಯ ಅವರು ಅಗಲಿದರು. ಈ ನೋವಿನಿಂದ ನಮ್ಮ ಪ್ರವಾಸ ಕಥನ ನಿಂತು ಹೋಗಿತ್ತು. ಇದೀಗ 9 ವರ್ಷಗಳ ನಂತರ ಬರೆದ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ’ ಎಂದು ತಿಳಿಸಿದರು.

ಪುಸ್ತಕದ ಮತ್ತೊಬ್ಬ ಬರಹಗಾರರಾದ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ‘ಕೃತಿ ರಚನೆ ದೊಡ್ಡ ವಿಚಾರವಲ್ಲ. ಅದನ್ನು ಬರೆದು ಪುಸ್ತಕ ರೂಪದಲ್ಲಿ ಹೊರತರುವುದು ಅತ್ಯಂತ ಕಷ್ಟದ ಕೆಲಸ. ದಾನಿಗಳ ಸಹಕಾರದ ಮೂಲಕ ಓದುಗರಿಗೆ ತಲುಪಿಸುವ ಕಾರ್ಯವನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆ ಮಾಡಿದ ಐ.ಎ.ಪಿ. ಪ್ರೈವೆಟ್ ಲಿಮಿಟೆಡ್‍ನ ಸಿ.ಇ.ಒ ಮುಕ್ಕಾಟಿರ ಸೋಮಣ್ಣ, ‘ಕೊಡವ ಮಕ್ಕಡ ಕೂಟದಿಂದ ಬರಹಗಾರರನ್ನು ಪ್ರೋತ್ಸಾಹಿಸವ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳು ಹೊರ ಬರಲಿ ಎಂದು ಶುಭ ಹಾರೈಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಅವರ ಸಂಪಾದಕೀಯದಲ್ಲಿ ಕೊಡವ ಮಕ್ಕಡ ಕೂಟದ 100ನೇ ಪುಸ್ತಕಕ್ಕೆ ಬರಗಾರರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ’ ಎಂದರು.

100 ಬರಹಗಾರರ ಲೇಖನಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಿ 100ನೇ ಪುಸ್ತಕವಾಗಿ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ, ಇತಿಹಾಸ, ಸೇರಿದಂತೆ ಸಮಾಜಮುಖಿ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತರಲು ನಿರ್ಧರಿಸಲಾಗಿದೆ. ಈ ಪ್ರಯತ್ನಕ್ಕೆ ಹಿರಿಯ, ಕಿರಿಯ ಎಲ್ಲಾ ಬರಹಗಾರರು ಸಹಕರಿಸುವಂತೆ ಮನವಿ ಮಾಡಿದರು.

ಆಸಕ್ತ ಬರಹಗಾರರು ಯಾವುದೇ ಜಾತಿ, ಮತ, ಬೇಧವಿಲ್ಲದೆ ತಮ್ಮ ಬರಹಗಳನ್ನು ಟೈಪ್ ಮಾಡಿ ಅಥವಾ ಬರೆದು ಪುತ್ತರಿರ ಕರುಣ್ ಕಾಳಯ್ಯ ಮೊ: 8762515659 ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಬಹುದು. ಲೇಖನಗಳನ್ನು ಜೂನ್ 30ರೊಳಗೆ ಕಳುಹಿಸಬೇಕು ಎಂದರು.

ಕಾಫಿ ಬೆಳೆಗಾರ ಮುಕ್ಕಾಟಿರ ಕಾವೇರಿಯಪ್ಪ ಹಾಗೂ ಅರಣ್ಯ ಇಲಾಖೆಯ ನಿವೃತ್ತ ನೌಕರರಾದ ಮುಕ್ಕಾಟಿರ ಸರೋಜ ಕಾವೇರಿಯಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT