ಗೋಣಿಕೊಪ್ಪಲು: ಮಾಯಮುಡಿ ಸಮೀಪದ ಕಾಫಿತೋಟದ ನಡುವಿನ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಹುಲಿ ಕಾಣಿಸಿಕೊಂಡು ಸಾರ್ವಜನಿಕರಿಗೆ ಆತಂಕ ಮೂಡಿಸಿದೆ.
ಬಾಳಾಜಿಯ ಪುಚ್ಚಿಮಾಡ ಶರಣು ಎಂಬುವರ ಕಾಫಿ ತೋಟದಲ್ಲಿ ಸುಳಿದಾಡುವುದನ್ನು ನೋಡಿದ ಸ್ಥಳೀಯರು ತಿತಿಮತಿ ವಲಯ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದರು. ಇದೀಗ ಹುಲಿ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಈ ಸ್ಥಳದ ಮತ್ತೂರು ಬಳಿಯಲ್ಲಿ 2 ದಿನಗಳ ಹಿಂದೆ ಮೇಕೆಯನ್ನು ಹುಲಿ ಕೊಂದು ಹಾಕಿತ್ತು. ಇದರಿಂದ ಹುಲಿ ಓಡಾಟ ಹೆಚ್ಚಾಗಿದ್ದು ಹುಲಿ ಸೆರೆ ಹಿಡಿದು ಸ್ಥಳೀಯರ ಆತಂಕ ದೂರ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.