ಗುಹ್ಯ ಗ್ರಾಮದಲ್ಲಿ 10ಕ್ಕೂ ಅಧಿಕ ಕಾಡಾನೆಗಳ ಹಿಂಡು ಕಳೆದ ಕೆಲವು ದಿನಗಳಿಂದ ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂದಲೆ ನಡೆಸುತ್ತಿದೆ. ಇದರಿಂದ ವಿವಿಧ ತೋಟದ ಕಾಫಿ ಗಿಡಗಳು, ಅಡಿಕೆ, ತೆಂಗು, ಬಾಳೆ ಕೃಷಿ ನಾಶವಾಗಿವೆ. ಗುಹ್ಯ ಗ್ರಾಮದ ಏಂಜಲ್ ಫೀಲ್ಡ್ ಎಸ್ಟೇಟ್, ರಾಯ್ ಗೋಡ್ ಎಸ್ಟೇಟ್ ಸೇರಿದಂತೆ ಖಾಸಗಿ ತೋಟಗಳಲ್ಲಿ ಕಾಡಾನೆ ಬೀಡುಬಿಟ್ಟಿದ್ದು, ರಾತ್ರಿ ವೇಳೆ ಮನೆಗಳ ಸಮೀಪಕ್ಕೆ ಬರುತ್ತಿವೆ. ಅಮ್ಮತ್ತಿ ರಸ್ತೆಯ ಮಂಡೇಪಂಡ ಪ್ರವೀಣ್ ಬೋಪಯ್ಯ ಎಂಬುವರ ಕಾಫಿ ತೋಟದಲ್ಲಿ 15 ಕಾಡಾನೆಗಳು ಬೀಡುಬಿಟ್ಟು, ತೋಟದ ಫಸಲನ್ನು ನಾಶಗೊಳಿಸಿವೆ. ಕಾಡಾನೆ ಹಾವಳಿಯಿಂದಾಗಿ ಕಾರ್ಮಿಕರು, ಶಾಲಾ ಮಕ್ಕಳು, ಸ್ಥಳೀಯರು ಭಯಭೀತರಾಗಿದ್ದಾರೆ.