ಸುಂಟಿಕೊಪ್ಪ (ಕೊಡಗು ಜಿಲ್ಲೆ): ಕಳೆದೊಂದು ವಾರದಿಂದ ಈ ಭಾಗದಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆ ಹಿಡಿದರು.
18–20 ವರ್ಷದ ಗಂಡಾನೆಯ ದಾಳಿಗೆ ಸಿಲುಕಿ ಈಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗಿರೀಶ್ ಎಂಬುವವರು ಮೃತಪಟ್ಟಿದ್ದರು. ಹಲವು ವಾಹನಗಳನ್ನು ಧ್ವಂಸಗೊಳಿಸಿದ್ದ ಈ ಆನೆ ತೋಟಗಳಲ್ಲಿನ ಬೆಳೆಗಳನ್ನು ನಾಶಪಡಿಸಿತ್ತು. ವಾಹನ ಸವಾರರ ಮೇಲೆ ಎರಗಿ ಅವರನ್ನು ಗಾಯಗೊಳಿಸುತ್ತಿತ್ತು. ಇದರಿಂದ ಕೆದಕಲ್ ವ್ಯಾಪ್ತಿಯಲ್ಲಿ ಜನರು ಓಡಾಡುವುದಕ್ಕೆ ಭಯಪಡುವ ವಾತಾವರಣ ಸೃಷ್ಟಿಯಾಗಿತ್ತು.