ಕೋಲಾರ: ತಾಲ್ಲೂಕಿನ ರಾಮಸಂದ್ರ ಚೆಕ್ಪೋಸ್ಟ್ನಲ್ಲಿ ಗುರುವಾರ ಪೊಲೀಸರು ಕಾರು ತಡೆದು ತಪಾಸಣೆ ನಡೆಸಿದಾಗ ದಾಖಲೆಗಳಿಲ್ಲದ ₹ 2.38 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಗಡಿಭಾಗಗಳಲ್ಲಿ ಚೆಕ್ಪೋಸ್ಟ್ ತೆರೆದಿದ್ದಾರೆ.
ಮಧ್ಯಾಹ್ನ ಬೆಂಗಳೂರು ಕಡೆಯಿಂದ ಕೋಲಾರದತ್ತ ಬರುತ್ತಿದ್ದ ಫಾರ್ಚುನರ್ ಕಾರನ್ನು ತಡೆದ ವೇಮಗಲ್ ಇನ್ಸ್ಪೆಕ್ಟರ್ ವೆಂಕಟೇಶ್ ಮತ್ತು ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ನಗದಿನ ಜೊತೆಗೆ ಷರ್ಟ್ ಹಾಗೂ ಸೀರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
‘ಕಾರಿನ ಡ್ಯಾಷ್ಬೋರ್ಡ್ನಲ್ಲಿ ಎನ್ವಲಪ್ ಕವರ್ನಲ್ಲಿ ಹಾಗೂ ಸೀಟು ಹಿಂಬದಿ ₹ 500 ಮುಖಬೆಲೆಯ ನೋಟುಗಳನ್ನು ಹಾಕಿಟ್ಟಿರುವುದು ಕಂಡುಬಂದಿದೆ. ಕಾರಿನಲ್ಲಿ ಅಂಜೂಬಾಸ್, ಗೋವಿಂದ ಹಾಗೂ ಹರೀಶ್ ಎಂಬ ಮೂವರು ಇದ್ದರು. ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ಪ್ರಕರಣ ದಾಖಲಿಸಿದ್ದು, ಕಾರನ್ನು ವಶಕ್ಕೆ ಪಡೆಯಲಾಗಿದೆ. ಮುಂಬರುವ ಚುನಾವಣೆ ಸಂಬಂಧ ಮತದಾರರಿಗೆ ಆಮಿಷವೊಡ್ಡಲು ಮುಳಬಾಗಿಲಿಗೆ ಹಣ ಸಾಗಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಬಿ.ಭಾಸ್ಕರ್, ಡಿವೈಎಸ್ಪಿ ಮುರಳೀಧರ್ ನಿರ್ದೇಶನದಂತೆ ಇನ್ಸ್ಪೆಕ್ಟರ್ ವೆಂಕಟೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಕಾನ್ಸ್ಟೆಬಲ್ಗಳಾದ ಮಹೇಶ್, ಮರೇಗೌಡ, ಚಾಲಕ ನಾಗೇಶ್ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.