ಕೋಲಾರ: ನಗರದ ಮಹಾಲಕ್ಷ್ಮೀ ಲೇಔಟ್ ಬಡಾವಣೆಯ ಫ್ಯಾನ್ಸಿ ಸ್ಟೋರ್ಗೆ ಹಾಡಹಗಲೇ ನುಗ್ಗಿದ ದುಷ್ಕರ್ಮಿಯು ಅಂಗಡಿ ಮಾಲೀಕರಾದ ನೀಲವೇಣಿ (29) ಎಂಬುವರ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ನಡೆಸಿ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ನಾಗನಾಯಕನಹಳ್ಳಿಯ ನೀಲವೇಣಿ ಅವರು ಮಹಾಲಕ್ಷ್ಮೀ ಲೇಔಟ್ನಲ್ಲಿ ಹಲವು ವರ್ಷಗಳಿಂದ ಫ್ಯಾನ್ಸಿ ಸ್ಟೋರ್ ಇಟ್ಟುಕೊಂಡಿದ್ದರು. ಎಲ್ಐಸಿ ಏಜೆಂಟ್ ಆಗಿರುವ ಅವರ ಪತಿ ಪ್ರತಿನಿತ್ಯದಂತೆ ಮಂಗಳವಾರ ಬೆಳಿಗ್ಗೆ ನೀಲವೇಣಿ ಅವರನ್ನು ನಾಗನಾಯಕನಹಳ್ಳಿಯಿಂದ ಬೈಕ್ನಲ್ಲಿ ಕರೆದುಕೊಂಡು ಬಂದು ಅಂಗಡಿ ಬಳಿ ಬಿಟ್ಟು ಹೋಗಿದ್ದರು.
ಬಳಿಕ 10.30ರ ಸುಮಾರಿಗೆ ಗ್ರಾಹಕನ ಸೋಗಿನಲ್ಲಿ ಅಂಗಡಿ ಬಳಿ ಬಂದಿರುವ ದುಷ್ಕರ್ಮಿಯ ಏಕಾಏಕಿ ಒಳ ನುಗ್ಗಿ ನೀಲವೇಣಿ ಅವರ ತಲೆಗೆ ಬ್ಯಾಟ್ನಿಂದ ಹೊಡೆದಿದ್ದಾನೆ. ಬಳಿಕ ಚಾಕುವಿನಿಂದ ಅವರ ಕತ್ತು ಕೊಯ್ದು ಚಿನ್ನದ ಸರ ಮತ್ತು ಅಂಗಡಿಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀಲವೇಣಿ ಅವರ ಪತಿಯು 10.45ರ ಸುಮಾರಿಗೆ ಪತ್ನಿಯ ಮೊಬೈಲ್ಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ, ನೀಲವೇಣಿ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಪತಿಯು ಪಕ್ಕದ ಅಂಗಡಿಯರಿಗೆ ಕರೆ ಮಾಡಿ ಪತ್ನಿಗೆ ಫೋನ್ ಕೊಡುವಂತೆ ಹೇಳಿದ್ದಾರೆ. ಅವರ ಮನವಿಯಂತೆ ಪಕ್ಕದ ಅಂಗಡಿಯವರು ನೀಲವೇಣಿ ಅವರಿಗೆ ಫೋನ್ ಕೊಡಲು ಹೋದಾಗ ಅಂಗಡಿ ಬಾಗಿಲು ಮುಚ್ಚಿತ್ತು ಎಂದು ನಗರ ಠಾಣೆ ಪೊಲೀಸರು ಹೇಳಿದ್ದಾರೆ.
ಆ ನಂತರ ಪತಿಯು ಅಂಗಡಿ ಬಳಿ ಬಂದು ಬಾಗಿಲು ತೆರೆದು ನೋಡಿದಾಗ ನೀಲವೇಣಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಅವರು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ನೀಲವೇಣಿ ಆಸ್ಪತ್ರೆಯಲ್ಲಿ ರಾತ್ರಿ ಮೃತಪಟ್ಟರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಯು ನೀಲವೇಣಿ ಅವರ ಅಂಗಡಿಗೆ ಬಂದು ಹೋಗಿರುವ ದೃಶ್ಯಾವಳಿಯು ಸಮೀಪದ ಮತ್ತೊಂದು ಅಂಗಡಿ ಮುಂಭಾಗದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಆಧರಿಸಿ ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದೇವೆ. ಆರೋಪಿಯ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ಬೆಚ್ಚಿಬಿದ್ದ ಜನ: ನಗರದಲ್ಲಿ ಕಳೆದ ಕೆಲ ದಿನಗಳಿಂದ ಸರಗಳವು ಪ್ರಕರಣಗಳು ಹೆಚ್ಚಿದ್ದು, ನೀಲವೇಣಿ ಅವರ ಕೊಲೆಯಿಂದ ಜನರು ಬೆಚ್ಚಿಬಿದ್ದಿದ್ದಾರೆ. ಸೋಮವಾರವಷ್ಟೇ (ಏ.19) ನಗರದ ಕೋಟೆ ಬಡಾವಣೆಯಲ್ಲಿ ದುಷ್ಕರ್ಮಿಯೊಬ್ಬ ಅಖಿಲಾ ಎಂಬ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನದ ಸರ ದೋಚಿ ಪರಾರಿಯಾಗಿದ್ದ. ಇದರ ಬೆನ್ನಲ್ಲೇ ಮಹಿಳೆಯ ಕೊಲೆ ನಡೆದಿರುವುದು ಜನರ ಆತಂಕ ಹೆಚ್ಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.