ಕೋಲಾರ: ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ (ಎಸ್ಎಫ್ಸಿಎಸ್) ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಕೆ.ವಿ.ದಯಾನಂದ್ ೩ನೇ ಭಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿ ಡೇವಿಡ್, ನಿರ್ದೇಶಕರಾಗಿ ಕೆ.ಎಸ್.ಕೃಷ್ಣಪ್ಪ, ಬಿ.ರಾಜಣ್ಣ, ರಾಮಾಂಜನೇಯ, ಮುನಿರಾಜು, ವೆಂಕಟೇಶ್, ಬೈರಮ್ಮ, ವಿಜಯಮ್ಮ, ಮಂಜುನಾಥ್, ಅಂಬರೀಶ್, ಚೌಡರೆಡ್ಡಿ ಅವಿರೋಧವಾಗಿ ಆಯ್ಕೆಯಾದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಅಧ್ಯಕ್ಷ ಕೆ.ವಿ.ದಯಾನಂದ ಮಾತನಾಡಿ, ‘ನಷ್ಟದಲ್ಲಿದ್ದ ಸಂಘವನ್ನು ಲಾಭದತ್ತ ತೆಗೆದುಕೊಂಡ ಹೋದ ಸಾಧನೆಯಿಂದ ನನ್ನನ್ನು ಮರು ಆಯ್ಕೆ ಮಾಡಿದ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದರು.
‘ಹಿಂದೆ 2010ರಲ್ಲಿ ₨ 20 ಲಕ್ಷ ನಷ್ಟದಲ್ಲಿದ್ದ ಸಂಘವು ಈಗ ₨ 3 ಕೋಟಿ ಲಾಭದಲ್ಲಿದೆ. ಇದರಿಂದ ₨ 25 ಕೋಟಿಯಷ್ಟು ವಿವಿಧ ರೀತಿಯ ಸಾಲ ನೀಡಲಾಗಿದ್ದು, ಶೇ.100ರಷ್ಟು ಮರುಪಾವತಿಯಾಗುತ್ತದೆ. ಸಂಘದ ಅಭಿವೃದ್ಧಿಯನ್ನು ಗಮನಿಸಿ ಗಣಕೀಕರಣಗೊಳಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ಹೇಳಿದರು.
‘ಸತತವಾಗಿ 10 ವರ್ಷ ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ. ಇಲ್ಲಿ ಪಾರದರ್ಶಕ ಆಡಳಿತ ನಡೆಸುವುದರ ಕತೆಗೆ ಸಂಘದ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮದ ಕುಟುಂಬಗಳ ಮನೆ ಬಾಗಿಲಿಗೆ ಸೌಕರ್ಯ ಕಲ್ಪಿಸಲಾಗುವುದು. ಇದಕ್ಕೆ ಆಡಳಿತ ಮಂಡಳಿಯವರೂ ಸಹಕಾರ ನೀಡಬೇಕು’ ಎಂದು ಕೋರಿದರು.
‘ಸಂಘದ ಮೂಲಕ ಸಾಲಕ್ಕಾಗಿ ಡಿಸಿಸಿ ಬ್ಯಾಂಕ್ಗೆ ಅರ್ಜಿ ಬಂದರೆ ಕಾಲಹರಣ ಮಾಡದೆ ದಾಖಲೆಗಳನ್ನು ಪರಿಶೀಲಿಸಿ ಸಾಲ ಮಂಜೂರು ಮಾಡಲಾಗುವುದು. ನಿರ್ದೇಶಕರು ಸುತ್ತಮುತ್ತಲಿನ ರೈತರ ಮನವೊಲಿಸಿ ಠೇವಣಿ ಇರಿಸಲು ಕ್ರಮಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ‘ಸೊಸೈಟಿಗಳು ಆರ್ಥಿಕವಾಗಿ ಸದೃಢಗೊಳ್ಳಲು ಸಾಲ ನೀಡಿಕೆ, ವಸೂಲಾತಿಗೆ ತಮ್ಮ ಕಾರ್ಯವನ್ನು ಸೀಮಿತಗೊಳಿಸದೇ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ನಡೆಸಲು ಮುಂದಾಗಬೇಕು’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್, ಟಿಎಪಿಸಿಎಂಸ್ ನಿರ್ದೇಶಕ ಇ.ಗೋಪಾಲಪ್ಪ ಹಾಜರಿದ್ದರು.