ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಮೌಲ್ಯ–ಬದ್ಧತೆ ಮುಖ್ಯ

Last Updated 31 ಜುಲೈ 2021, 13:23 IST
ಅಕ್ಷರ ಗಾತ್ರ

ಕೋಲಾರ: ‘ಪತ್ರಕರ್ತರಲ್ಲಿ ವೃತ್ತಿ ಮೌಲ್ಯ, ಹೋರಾಟಗಾರರಲ್ಲಿ ಪ್ರಾಮಾಣಿಕತೆ, ಬದ್ಧತೆಯಿದ್ದರೆ ಸುಂದರ ಹಾಗೂ ಸಮೃದ್ಧಿಯ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಮಾಜಿ ಶಾಸಕ ಹಾಗೂ ಪತ್ರಕರ್ತರಾದ ದಿವಂಗತ ಕೆ.ಎಂ.ಮುನಿಯಪ್ಪ ಆದರ್ಶವಾಗಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸ್ಮರಿಸಿದರು.

ಮನ್ವಂತರ ಜನಸೇವಾ ಟ್ರಸ್ಟ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆ.ಎಂ.ಮುನಿಯಪ್ಪರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ‘ಇಂದು ಹೋರಾಟಗಳು ಫ್ಯಾಷನ್ ಆಗಿವೆ. ಆದರೆ, ಕೆ.ಎಂ.ಮುನಿಯಪ್ಪ ಅವರ ಹೋರಾಟದ ಹಾದಿ ಯುವಕರಿಗೆ ಆದರ್ಶವಾಗಿದೆ’ ಎಂದರು.

‘ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಹಲವರು ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಪತ್ರಕರ್ತರ ಸಂಘವನ್ನು ಬಲಿಷ್ಠಗೊಳಿಸಿ ಸುಂದರ ಭವನ ನಿರ್ಮಿಸಿದ್ದಾರೆ. ಅವರೆಲ್ಲರ ನೆನಪು ಶಾಶ್ವತವಾಗಿರಲು ಸಂಘದಿಂದ ಪುಸ್ತಕ ಹೊರತರಬೇಕು’ ಎಂದು ಸಲಹೆ ನೀಡಿದರು.

‘1979-81ರಲ್ಲಿ ಕೆ.ಎಂ.ಮುನಿಯಪ್ಪರ ಪರಿಚಯ ಆಯಿತು. ಹೊನ್ನುಡಿ ದಿನಪತ್ರಿಕೆಯ ವರದಿಗಾರರಾಗಿದ್ದ ಅವರು ಸುದ್ದಿಗಳನ್ನು ಬರೆದು ಪೋಸ್ಟ್ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಪತ್ರಕರ್ತರ ಸಂಘಕ್ಕೆ ನಿವೇಶನಕ್ಕಾಗಿ ಚಿತ್ರದುರ್ಗದ ಕುಮಾರೇಶ್ವರ ನಾಟಕ ಸಂಘದ ಕಲಾವಿದರನ್ನು ಕರೆಯಿಸಿ ನಾಟಕದ ಮೂಲಕ ಹಣ ಸಂಗ್ರಹಿಸಿದ್ದರು’ ಎಂದು ಸಂಘದ ಮಾಜಿ ಅಧ್ಯಕ್ಷ ಎಂ.ಜಿ.ಪ್ರಭಾಕರ್ ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಮನ್ವಂತರ ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್, ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕಿ ಅರುಣಮ್ಮ, ಕನ್ನಡಪರ ಹೋರಾಟಗಾರರ ಒಕ್ಕೂಟದ ಅಧ್ಯಕ್ಷ ಅ.ಕೃ.ಸೋಮಶೇಖರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT