ಗುರುವಾರ , ಮಾರ್ಚ್ 30, 2023
32 °C

ಕನ್ನಡದ ಕಂಪು ಪಸರಿಸಿದ ಚನ್ನಯ್ಯ: ವೆಂಕಟಸ್ವಾಮಿ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೇಶದ ಸಂವಿಧಾನ ರಚನಾ ಸಭೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಕನ್ನಡದ ಕಂಪು ಪಸರಿಸಿದ ಮಾಜಿ ಸಚಿವ ದಿವಂಗತ ಟಿ.ಚನ್ನಯ್ಯ ಅವರಿಗೆ ಮರಣೋತ್ತರವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದು ನೋವಿನ ಸಂಗತಿ’ ಎಂದು ಸಮತಾ ಸೈನಿಕ ದಳ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ವಿಷಾದಿಸಿದರು.

ಸಮತಾ ಸೈನಿಕ ದಳ ಸಂಘಟನೆ ವತಿಯಿಂದ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಟಿ.ಚನ್ನಯ್ಯರ 109ನೇ ಜಯಂತಿಯಲ್ಲಿ ಮಾತನಾಡಿ, ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ನಗರದ ನಿರ್ಮಾತೃವಾದ ಚನ್ನಯ್ಯ ಅವರು ವಿಧಾನಸೌಧ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅವರು ಬಂಧಿಖಾನೆ ಸೇರಿದಂತೆ 8 ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದರು’ ಎಂದು ಸ್ಮರಿಸಿದರು.

‘ಕೋಲಾರದಲ್ಲಿ ನಚಿಕೇತ ವಿದ್ಯಾರ್ಥಿನಿಲಯ ನಿರ್ಮಾಣ, ಬೆಂಗಳೂರಿನ ಇಂದಿರಾ ನಗರ ಬಡಾವಣೆ, ಕೋಲಾರಕ್ಕೆ ವಿದ್ಯುತ್ ತಂದಿದ್ದು ಸೇರಿದಂತೆ ಹಲವು ಸಾಧನೆ ಮಾಡಿದ ಮೊದಲ ದಲಿತ ಮಂತ್ರಿ ಚನ್ನಯ್ಯ ಅವರನ್ನು ಎಲ್ಲಾ ಸರ್ಕಾರಗಳು ಮರೆತಿವೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತು ವಿಧಾನಸೌಧ ಆವರಣದಲ್ಲಿ ಮತ್ತು ಕೋಲಾರದಲ್ಲಿ ಚನ್ನಯ್ಯರ ಪ್ರತಿಮೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ಚನ್ನಯ್ಯ ಸಾಕಷ್ಟು ಸಾಧನೆ ಮಾಡಿದ್ದರೂ ಅವರು ದಲಿತರೆಂಬ ಕಾರಣಕ್ಕೆ ಯಾವುದೇ ದಾಖಲೆಪತ್ರ ಸಿಗದಿರುವುದು ವಿಷಾದನೀಯ. ಮುಂದಿನ ಪೀಳಿಗೆಗೆ ಚನ್ನಯ್ಯರ ಬಗ್ಗೆ ತಿಳಿಸಲು ಅವರ ಜೀವನ ಚರಿತ್ರೆಯ ಬೃಹತ್‌ ಗ್ರಂಥ ರೂಪಿಸಬೇಕು’ ಎಂದು ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಗಣೇಶ್ ಸಲಹೆ ನೀಡಿದರು.

ಮಾಹಿತಿಯಿಲ್ಲ: ‘ಚನ್ನಯ್ಯರ ಬಗ್ಗೆ ಗೆಜೆಟ್‌ ಮತ್ತು ಗೂಗಲ್‌ನಲ್ಲಿ ಯಾವುದೇ ಮಾಹಿತಿಯಿಲ್ಲ. ಸರ್ಕಾರಕ್ಕೆ ಕಾಯದೆ ತಂತ್ರಜ್ಞಾನ ಬಳಸಿಕೊಂಡು ಕಿರುಚಿತ್ರಗಳು ಮತ್ತು ಯೂಟ್ಯೂಬ್‌ ಮೂಲಕ, ಪುಸ್ತಕದ ರೂಪದಲ್ಲಿ ಜನರಿಗೆ ಮಾಹಿತಿಯನ್ನು ತಲುಪಿಸುವ ಕೆಲಸ ಮಾಡಬೇಕು’ ಎಂದು ಉಪನ್ಯಾಸಕ ಅರಿವು ಶಿವಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಲಿತ ಮುಖಂಡರು ಚನ್ನಯ್ಯರ ಸಾಧನೆಯನ್ನು ಸ್ಮರಿಸಿ, ಅವರ ಪುತ್ಥಳಿ ನಿರ್ಮಿಸುವಂತೆ ಹಾಗೂ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಮನವಿ ಮಾಡಿದರು.

ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಯುವ ಘಟಕದ ಅಧ್ಯಕ್ಷ ಡಿ.ಎಂ.ಅಂಬರೀಶ್, ಭಾರತೀಯ ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ದಲಿತ ಮುಖಂಡರಾದ ಮುನಿರಾಜು, ವಿಜಯ್‌ಕುಮಾರ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು