ಕೋಲಾರ: ‘ವಾಣಿಜ್ಯ ಬ್ಯಾಂಕ್ಗಳವರು ಎಂದಿಗೂ ಬಡವರಿಗೆ ಸಹಾಯ ಮಾಡುವುದಿಲ್ಲ. ಸಾವಿರಾರು ಕೋಟಿ ಹಣ ದೋಚಿ ದೇಶ ಬಿಟ್ಟು ಹೋಗುವವರಿಗೆ ಸಾಲ ಕೊಡುತ್ತಾರೆ’ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಆರೋಪಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್, ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೨೩೨ ಮಹಿಳಾ ಸಂಘಗಳಿಗೆ ₨ ೧೧.೩೭ ಕೋಟಿ ಸಾಲದ ಚೆಕ್ ವಿತರಿಸಿ ಮಾತನಾಡಿ, ‘ಬಡವರು ಸಾಲ ಕಟ್ಟದಿದ್ದರೆ ಮನೆ ಮುಂದೆ ತಮಟೆ ಭಾರಿಸುತ್ತಾರೆ, ಶ್ರೀಮಂತರಿಗೆ ರಕ್ಷಣೆ ನೀಡುತ್ತಾರೆ’ ಎಂದರು.
‘ನನ್ನ ಕುಟುಂಬ ಸಾಲದ ಸಂಕಷ್ಟ ಅನುಭವಿಸಿದ್ದನ್ನು ಕಂಡಿದ್ದೆನೆ. ಆ ಅನುಭವದಿಂದ ಡಿಸಿಸಿ ಬ್ಯಾಂಕ್ ಮೂಲಕ ಎರಡೂ ಜಿಲ್ಲೆಯ ಬಡವರಿಗೆ ಆರ್ಥಿಕ ನೆರವು ಕಲ್ಪಿಸಲು ಅಂದಿನ ಸರ್ಕಾರ ಯೋಜನೆ ರೂಪಿಸಿದೆ. ಹೆಣ್ಣು ಮಕ್ಕಳಿಗೆ ₨ 50 ಸಾವಿರ ನೀಡುತ್ತಿದ್ದ ಸಾಲದ ಮೊತ್ತ ₨ 1 ಲಕ್ಷಕ್ಕೆ ಏರಿಕೆ ಮಾಡಲು ನನ್ನ ವಿರೋಧಿಗಳು ಏನೇನೋ ಮಾತನಾಡುತ್ತಾರೆ, ಅವರಿಗೆ ದೇವರು ಒಳ್ಳೇದು ಮಾಡಲಿ’ ಎಂದು ಪ್ರಾರ್ಥಿಸಿದರು.
‘ವಾಣಿಜ್ಯ ಬ್ಯಾಂಕಿನಲ್ಲಿ ವಹಿವಾಟು ನಡೆಸಿದರೂ ನಿಮಗೆ ಏನು ಲಾಭ ಬರುವುದಿಲ್ಲ. ಉಳಿತಾಯ ಖಾತೆಯಲ್ಲಿ ಹಣ ಕಡಿಮೆಯಿದ್ದರೂ ದಂಡ ಹಾಕುತ್ತಾರೆ. ನಿಮ್ಮ ಬಳಿಯಿರುವ ಉಳಿತಾಯ ಹಣವನ್ನು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಕಾರ ನೀಡಬೇಕು’ ಎಂದು ಕೋರಿದರು.
‘ಡಿಸಿಸಿ ಬ್ಯಾಂಕ್ ಸಾಲಕ್ಕೆ ಮಾತ್ರ ಸಿಮೀತ ಎಂಬ ಭಾವನೆಯಿಂದ ಹೊರ ಬನ್ನಿ. ಬಡವರು ಠೇವಣಿ ಇಟ್ಟರೂ ಬಡ್ಡಿ ಬರುತ್ತದೆ. ಸಹಕಾರಿ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು (ಎಂಪಿಸಿಎಸ್)ಗಳು ರೈತರ ಖಾತೆ ತೆರೆಸಲು ಅದಷ್ಟು ಬೇಗ ಮುಂದಾಗಬೇಕು’ ಎಂದು ಸಲಹೆ ನೀಡಿದರು.
‘ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆಯಲು ಆಸ್ತಿ, ಒಡವೆ ಅಡಮಾನ ಇಡಬೇಕು. ಆದರೆ ಡಿಸಿಸಿ ಬ್ಯಾಂಕ್ ನಿಮ್ಮನ್ನು ಕೂರಿಸಿ ಯಾವುದೇ ಭದ್ರತೆ ಇಲ್ಲದೆ, ಜಾತಿ, ಪಕ್ಷ ಕೇಳದೇ ಸಾಲ ನೀಡುತ್ತಿದೆ. ನೀವು ಸಮರ್ಪಕ ಸಾಲ ಮರುಪಾವತಿಸಿ ನಿಮ್ಮ ನಂಬಿಕೆ ಉಳಿಸಿಕೊಳ್ಳಬೇಕು’ ಎಂದು ಕೋರಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಸೋಮಣ್ಣ, ಸೊಣ್ಣೇಗೌಡ, ಎಂ.ಎಲ್.ಅನಿಲ್ ಕುಮಾರ್, ಸುಗಟೂರು ಎಸ್ಎಫ್ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಜಿ.ಪಂ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಸಹಕಾರಿ ಯೂನಿಯನ್ ನಿರ್ದೇಶಕ ಭಾಸ್ಕರ್ ಹಾಜರಿದ್ದರು.