ಬಂಗಾರಪೇಟೆ: ತಾಲ್ಲೂಕಿನ ಯಳೇಸಂದ್ರ ಗ್ರಾಮದ ಅರ್ಜುನಪ್ಪ ಎಂಬುವರ ಟೊಮೆಟೊ ತೋಟಕ್ಕೆ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿದ್ದು, ತೋಟ ಸಂಪೂರ್ಣ ನಾಶವಾಗಿದೆ.
ಹಳೆ ವೈಷಮ್ಯದಿಂದ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಅರ್ಜುನಪ್ಪ ಎರಡು ಎಕರೆ ಜಮೀನಿನಲ್ಲಿ 10 ಸಾವಿರ ಟೊಮೆಟೊ ಸಸಿ ನಾಟಿ ಮಾಡಿದ್ದರು. ಇದಕ್ಕಾಗಿ ₹4 ಲಕ್ಷ ಖರ್ಚು ಮಾಡಿದ್ದರು. ಆದರೆ, ಫಸಲು ಬರುವ ಹಂತದಲ್ಲಿ ಕಿಡಿಗೇಡಿಗಳು ಬೆಳೆ ನಾಶಮಾಡಿದ್ದಾರೆ.
ಪ್ರಸ್ತುತ ಟೊಮೆಟೊ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ದುಪ್ಪಟ್ಟು ಬೆಲೆ ಸಿಗುವ ನಿರೀಕ್ಷೆಯಿತ್ತು. ಘಟನೆಯಿಂದ ಆತಂಕಕ್ಕೀಡಾಗಿರುವ ರೈತ ಪಟ್ಟಣದ ಠಾಣೆಗೆ ದೂರು ನೀಡಿದ್ದಾರೆ.