ಕೋಲಾರ: ಮಾಜಿ ಯೋಧರ ತಂಡದಿಂದ ಜಿಲ್ಲಾ ಕೇಂದ್ರದಲ್ಲಿ ಭಾನುವಾರ ಕೊರೊನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಿದರು.
ನಗರದ ಗಾಂಧಿವನದಿಂದ ಆರಂಭಿಸಿದ ಜಾಗೃತಿ ಕಾರ್ಯಕ್ರಮವು ಅಮ್ಮವಾರಿಪೇಟೆ, ಬೊಂಬುಬಜಾರ್, ರಹಮತ್ನಗೆ, ಅಂಬೇಡ್ಕರ್ ಬೀದಿ, ಹೊಸ ಬಸ್ ನಿಲ್ದಾಣ, ಕ್ಲಕ್ಟವರ್, ಹಾರೋಹಳ್ಳಿ ಮುಖ್ಯರಸ್ತೆ, ಟೇಕಲ್ ರಸ್ತೆ, ಡೂಂ ಲೈಟ್ ವೃತ್ತಕ್ಕೆ ಮೆರವಣಿಗೆ ನಡೆಸಿದರು.
ತಂಡವನ್ನು ಭೇಟಿ ಮಾಡಿ ತಹಶೀಲ್ದಾರ್ ಶೋಭಿತಾ ನಗರದ ಸಮೀಪದ ಎಪಿಎಂಸಿ ಮಾರುಕಟ್ಟೆಗೆ ಕರೆದೊಯ್ದರು, ಅಲ್ಲಿನ ಅಮಾಲಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ್ ಮಾತನಾಡಿ, ‘ಕೊರೊನಾ ವೈರಸ್ ಬಗ್ಗೆ ಯಾರು ಉದಾಸೀನ ತೋರಬಾರದು, ವೈರಸ್ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು, ಜತೆಗೆ ರಕ್ತ ಪರೀಕ್ಷೆ ಮಾಡಿಸಬೇಕು’ ಎಂದು ಸಲಹೆ ನೀಡಿದರು.
‘ಇತ್ತೀಚಿಗೆ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ, ಇದಕ್ಕೆ ಯಾರು ಕಿವಿಗೋಡಬಾರದು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಉಪಯೋಗಿಸಬೇಕು. ಸ್ವಚ್ಛತೆ ಕಾಪಾಡಬೇಕು’ ಎಂದು ಸಲಹೆ ನೀಡಿದರು.
‘ದೇಶಾದ್ಯಂತ ಲಾಕ್ ಡೌನ್ ಆದೇಶ ಹೊರಡಿಸಿದ್ದು ಇದನ್ನು ಪ್ರತಿಯೊಬ್ಬರು ಪಾಲಿಸಬೇಕು. ಸರ್ಕಾರಗಳು ಯಾರ ಗೋಸ್ಕರ ಇಷ್ಟೇಲ್ಲ ಕ್ರಮಕೈಗೊಂಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆದೇಶವನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.