ಕೋಲಾರ: ಠೇವಣಿ ಸಂಗ್ರಹಣೆಯ ಸಾಧಕ- ಬಾಧಕ ಕುರಿತು ಚರ್ಚಿಸಲು ನಗರದ ಜಿಲ್ಲಾ ಸಹಕಾರಿ ಒಕ್ಕೂಟದ ಸಭಾಂಗಣದಲ್ಲಿ ಭಾನುವಾರ (ನ.8) ಬೆಳಿಗ್ಗೆ 10.30ಕ್ಕೆ ಬ್ಯಾಂಕ್ನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಭೆ ಕರೆಯಲಾಗಿದೆ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡರ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ. ಬ್ಯಾಂಕ್ನ 2020–21ನೇ ಸಾಲಿನ ಹಣಕಾಸು ವರ್ಷಕ್ಕೆ ರೂಪಿಸಿರುವ ಕ್ರಿಯಾಯೋಜನೆ ಪ್ರಕಾರ ₹ 405 ಕೋಟಿ ಠೇವಣಿ ಸಂಗ್ರಹ ಗುರಿ ಹೊಂದಲಾಗಿದೆ. ಈ ಗುರಿ ತಲುಪಲು ಆರ್ಥಿಕ ವರ್ಷಾತ್ಯಂಕ್ಕೆ 146 ದಿನ ಮಾತ್ರ ಬಾಕಿಯಿವೆ ಎಂದು ಹೇಳಿದ್ದಾರೆ.
ನಿಗದಿತ ಗಡುವಿನೊಳಗೆ ಠೇವಣಿ ಸಂಗ್ರಹ ಗುರಿ ಸಾಧನೆಗಾಗಿ ಇರುವ ಸಾಧಕ -ಬಾಧಕಗಳ ಕುರಿತು ಸಮಗ್ರವಾಗಿ ಚರ್ಚಿಸಲು ಮತ್ತು ಸುಸ್ತಿಯಾಗಿರುವ ಕೃಷಿ ಸಾಲಗಳ ವಸೂಲಾತಿ ವೇಳಾಪಟ್ಟಿ, ವಸೂಲಿಗೆ ಸಿಬ್ಬಂದಿಯ ತಂಡ ರಚಿಸಲು ಈ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ ಶಾಖೆಗಳ ಸಿಬ್ಬಂದಿ, ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಹಾಜರಿರಬೇಕು. ಜತೆಗೆ ಆಯಾ ಶಾಖೆ ವ್ಯಾಪ್ತಿಯ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.