ಶ್ರೀನಿವಾಸಪುರ: ಸರ್ಕಾರ ಮೀನು ಪೋಷಕರ ಹಿತದೃಷ್ಟಿಯಿಂದ ಬಯಲು ಸೀಮೆಯಲ್ಲಿನ ಕೆರೆಗಳಲ್ಲಿ ತುಂಬಿರುವ ಹೂಳು ತೆಗೆದು ನೀರು ನಿಲ್ಲುವಂತೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೀನು ಪೋಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಬೇಕು. ಮೀನುಗಾರರು ತಮ್ಮ ಕಸುಬು ಕೈಗೊಳ್ಳಲು ಅಗತ್ಯವಾದ ಎಲ್ಲ ನೆರವನ್ನೂ ನೀಡಬೇಕು ಎಂದರು.
ತಾಲ್ಲೂಕಿನ ಉತ್ತರ ಭಾಗದಲ್ಲಿ ಆಳವಾದ ಚಿಕ್ಕ ಕೆರೆಗಳಿವೆ. ಅವುಗಳಲ್ಲಿ ಮಳೆ ನೀರು ನಿಲ್ಲುವಂತೆ ಮಾಡಿದರೆ ಮೀನು ಸಾಕಾಣಿಕೆ ಮಾಡಲು ಸಾಧ್ಯವಾಗುತ್ತದೆ. ಹೂಳು ತುಂಬಿದ ಕೆರೆಗಳಿಂದಾಗಿ ಮೀನು ಕೃಷಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಾಟಿ ಮೀನು ತನ್ನ ಅಸ್ಥಿತ್ವ ಕಳೆದುಕೊಂಡಿದೆ. ಈ ಪರಿಸ್ಥಿತಿ ಬದಲಾಗಬೇಕು. ಮೀನು ಪಾಲಕರು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಮೀನುಗಾರಿಕೆ ಕೈಗೊಳ್ಳಬೇಕು ಎಂದು ಹೇಳಿದರು.
ಮೀನು ಪೋಷಕರಾದ ವೆಂಕಟರವಣಪ್ಪ, ವೆಂಕಟರಮಣಪ್ಪ ಅವರನ್ನು ಸನ್ಮಾನಿಸಲಾಯಿತು. ಮುನಯ್ಯ, ನಂಜುಂಡಪ್ಪ, ಪ್ರಭಾಕರಗೌಡ, ಅಯ್ಯಪ್ಪ, ಶಿವಶಂಕರ್, ವಿಶ್ವನಾಥ್ ಇದ್ದರು.