ಬಂಗಾರಪೇಟೆ: ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು, ಈ ಪೈಕಿ ಎರಡು ಪಂಚಾಯಿತಿಯಲ್ಲಿ ಕಾಂಗ್ರೆಸ್ ಮತ್ತು ಒಂದು ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ.
ಬೂದಿಕೋಟೆ ಪಂಚಾಯಿತಿ ಅಧ್ಯಕ್ಷರಾಗಿ ಬಸವರಾಜಮ್ಮ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಹಾಗೂ ಚಂದ್ರಪ್ಪ ಉಮೇದುವಾರಿಕೆ ಸಲ್ಲಿಸಿದ್ದರು. ಮಂಜುನಾಥ್ 9 ಮತ ಪಡೆದು ಜಯಗಳಿಸಿದರು.
ಯಳೇಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀನಿವಾಸರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಪ್ರಮೀಳಮ್ಮ ಅವಿರೋಧ ಆಯ್ಕೆಯಾದರು.ಕೇತಗಾನಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ ಆಶಾಲತಾ ಮತ್ತು ಉಪಾಧ್ಯಕ್ಷರಾಗಿ ಕೆ.ವಿ. ಮಂಜುಳಾ ಅವಿರೋಧವಾಗಿ ಆಯ್ಕೆಯಾದರು.
ಗೆದ್ದ ಸಂದರ್ಭದಲ್ಲಿ ಪಕ್ಷೇತರರು ಎಂದು ಹೇಳಿಕೊಂಡ ಪಂಚಾಯಿತಿಯ ಎಲ್ಲಾ 19 ಸದಸ್ಯರು ಒಟ್ಟಿಗಿದ್ದರು. ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಸ್ಥಳಕ್ಕೆ ಧಾವಿಸಿದ ಬಳಿಕ ಈ ಪೈಕಿ 15 ಸದಸ್ಯರು ಬಿಜೆಪಿಯಡಿ ಗುರುತಿಸಿಕೊಂಡರು. ಉಳಿದ 4 ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಿಂದ ಹೊರಗುಳಿದರು.
ಕೇತಗಾನಹಳ್ಳಿ ಪಂಚಾಯಿತಿಯ ಬೆಜೆಪಿ ಬೆಂಬಲಿತ ಅಭ್ಯರ್ಥಿಗಳೊಂದಿಗೆ ಮಾಜಿ ಶಾಸಕ ನಾರಾಯಣಸ್ವಾಮಿ ಅವರು ಬಹಿರಂಗವಾಗಿ ಗುರುತಿಸಿಕೊಂಡಿದ್ದು, ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ಕೆಲವು ವರ್ಷಗಳ ಹಿಂದೆ ಬಿಜೆಪಿ ಬಿಟ್ಟು ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ ನಾರಾಯಣಸ್ವಾಮಿ ಮತ್ತೆ ಬಿಜೆಪಿ ಸೇರುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ನಡೆದಿತ್ತು. ಆದರೆ, ಅವರು ಬಹಿರಂಗವಾಗಿ ಬಿಜೆಪಿ ಕಾರ್ಯಕ್ರಮ ಅಥವಾ ಪಕ್ಷದಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ.
ಗುರುವಾರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆಯಲ್ಲಿ ಕಾಣಿಸಿಕೊಂಡ ಅವರು ಬಹಿರಂಗವಾಗಿ ಬಿಜೆಪಿ ಪರವಾಗಿ ಮಾತನಾಡಿದರು.
ತಾಲ್ಲೂಕಿನ ಎಲ್ಲಾ 21 ಪಂಚಾಯಿತಿಗಳಿಗೆ ಚುನಾವಣೆ ಮುಗಿದಿದೆ. ಈ ಪೈಕಿ 16 ಪಂಚಾಯಿತಿಯಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿದೆ. ಮೂರು ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಒಂದು ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಯಾವುದೇ ಪಕ್ಷದಲ್ಲಿ ನಿಖರವಾಗಿ ಗುರುತಿಸಿಕೊಂಡಿಲ್ಲ.