ಕೆಜಿಎಫ್: ಪ್ರತಿ ತಿಂಗಳು ಆದಾಯ ಇಲ್ಲದ ಕುಟುಂಬಗಳಿಗೆ ಮಹಿಳೆ ಸಂಸಾರ ನಿರ್ವಹಣೆ ಮಾಡಲು ಸರ್ಕಾರ ಘೋಷಣೆ ಮಾಡಿರುವ ಯೋಜನೆಗಳು ಸಹಕಾರಿ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ತಾಲ್ಲೂಕಿನ ಸುಂದರಪಾಳ್ಯ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿ, ಬಡವರ ಪರವಾಗಿ ನಿಲ್ಲುವ ಯೋಜನೆ ಜಾರಿಗೆ ತಂದು ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಕ್ಷೇತ್ರದಲ್ಲಿ ವಸತಿ ರಹಿತರಿಗಾಗಿ 1200 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಪಕ್ಷಾತೀತವಾಗಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು. ಇನ್ನೂ ಹಲವು ಗ್ರಾಮಗಳಲ್ಲಿ ನಿವೇಶನ ರಹಿತರು ಇದ್ದು ಅವರಿಗೆ ಕೂಡ ಮನೆಗಳನ್ನು ನೀಡಲು ಕಂದಾಯ ಇಲಾಖೆಗೆ ಖಾಲಿ ಜಾಗ ಗುರುತಿಸಿಕೊಡಲು ಸೂಚಿಸಲಾಗಿದೆ ಎಂದು ಶಾಸಕಿ ತಿಳಿಸಿದರು.
ತಹಶೀಲ್ದಾರ್ ಕೆ.ನಾಗವೇಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಹರ್ಥಿ, ಸಿಡಿಪಿಒ ರಾಜೇಶ್, ಸಮಾಜ ಕಲ್ಯಾಣ ಅಧಿಕಾರಿ ಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಎಇಇ ಶೇಷಾದ್ರಿ, ಗ್ರಾಮ ಪಂಚಾಯಿತಿ ಸದಸ್ಯರು, ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.