ಕೋಲಾರ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು.
ಆದರೆ, ಈ ಪುಷ್ಪಾರ್ಚನೆಯನ್ನು ಕಣ್ತುಂಬಿಕೊಳ್ಳಲು ಹೆಚ್ಚಿನವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಆ ಹೆಲಿಕಾಪ್ಟರ್ ದೂಳೆಬ್ಬಿಸಿತು. ಸನಿಹದಲ್ಲಿ ಹಾರಾಟ ನಡೆಸಿದ್ದರಿಂದ ಎದ್ದ ದೂಳಿನ ಭರಾಟೆಗೆ ಜನರು ಕಣ್ಣು ಮುಚ್ಚಿಕೊಂಡರು. ಇಲ್ಲವೇ ಬೆನ್ನು ತಿರುಗಿಸಿ ದೂಳಿನಿಂದ ಪಾರಾಗಲು ಪ್ರಯತ್ನಿಸಿದರು. ಬಿಳಿ ಉಡುಪು ಕೆಂಪಾಯಿತು. ಆ ಮಟ್ಟಿಗೆ ದೂಳು ಹಾಗೂ ಗಾಳಿ ಬೀಸಿತು. ಪಥಸಂಚಲನ ಮಾಡಲು ಸಜ್ಜಾಗಿದ್ದ ಪೊಲೀಸರು, ಶಾಲಾ ಮಕ್ಕಳು ದೂಳಿನಿಂದ ಪಾರಾಗಲು ಪರದಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ‘ಹೆಲಿಕಾಪ್ಟರ್ ನನ್ನದೇ. ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ಮತ್ತಷ್ಟು ಮೆರುಗು ಸಿಗಲಿ ಎಂಬ ಉದ್ದೇಶದಿಂದ ಪುಷ್ಪಾರ್ಚನೆ ಮಾಡಲು ಹೆಲಿಕಾಪ್ಟರ್ ತರಲಾಯಿತು. ಮಕ್ಕಳಿಗೂ ಖುಷಿ ಆಗುತ್ತದೆ ಅಲ್ಲವೇ? ಆದರೆ, ದೂಳು ಏಳದಂತೆ ನೆಲಕ್ಕೆ ನೀರು ಹಾಕಿದ್ದರೆ ಸರಿ ಹೋಗುತಿತ್ತು’ ಎಂದರು.
ಕೋಲಾರದಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವ ದಿನಾಚರಣೆ ವೇಳೆ ಪುಷ್ಪಾರ್ಚನೆ ಮಾಡಿದ ಹೆಲಿಕಾಪ್ಟರ್
ಕೋಲಾರದಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವ ದಿನಾಚರಣೆ ವೇಳೆ ಪುಷ್ಪಾರ್ಚನೆ ಮಾಡಲು ಬಂದ ಹೆಲಿಕಾಪ್ಟರ್
ಕೋಲಾರದಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವ ದಿನಾಚರಣೆ ವೇಳೆ ರಾಷ್ಟ್ರಧ್ವಜದ ಮೇಲೆ ಪುಷ್ಪಾರ್ಚನೆ ಮಾಡಿದ ಹೆಲಿಕಾಪ್ಟರ್