ಕೆಜಿಎಫ್: ನಗರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ವಾಸ ಮಾಡುತ್ತಿದ್ದು, ಅವರಿಗೆ ಮೂಲ ಸೌಲಭ್ಯಗಳುಳ್ಳ ಇಎಸ್ಐ ಆಸ್ಪತ್ರೆ ಒದಗಿಸಿಕೊಡಬೇಕು ಎಂದು ಕಾರ್ಮಿಕರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಮಾಡಿದರು.
ರಾಬರ್ಟ್ಸನ್ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ದಿಢೀರ್ ಭೇಟಿ ನೀಡಿದ ಸಚಿವರು ಕೆಲ ಕಾರ್ಮಿಕರನ್ನು ಮತ್ತು ಬಿಜೆಪಿ ನಾಯಕರನ್ನು ಭೇಟಿ ಮಾಡಿ ವಿಚಾರಣೆ ನಡೆಸಿದರು.
ಇಲ್ಲಿನ ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯಗಳು ಇಲ್ಲ. ತುರ್ತು ಚಿಕಿತ್ಸೆಗೆ ಕೋಲಾರ ಇಲ್ಲವೇ ಬೆಂಗಳೂರಿಗೆ ರೋಗಿಗಳನ್ನು ವರ್ಗಾಯಿಸುತ್ತಾರೆ. ಆದ್ದರಿಂದ ಇಲ್ಲಿಯೇ ಸಿಬ್ಬಂದಿಯನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವರು ತಕ್ಷಣ ದೂರವಾಣಿ ಮೂಲಕ ನಿರ್ದೇಶಕರ ಬಳಿ ಮಾತನಾಡಿ, ಇಬ್ಬರು ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಸೂಚಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕಮಲನಾಥನ್, ಮುಖಂಡರಾದ ರವಿಕುಮಾರ್, ಪಾಂಡ್ಯನ್, ರವಿ ಇದ್ದರು.