ಕೋಲಾರ: ‘ಚುನಾವಣೆ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ಪ್ರತಿಭಟನೆಗಳು ನಿತ್ಯ ನಡೆಯುತ್ತಿರುತ್ತವೆ. ಆ.26ರಂದು ಪ್ರತಿಭಟನೆಗೆ ಕರೆ ನೀಡಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಕಡೆಯವರೇ ಉದ್ದೇಶಪೂರ್ವಕವಾಗಿ ಕೋಳಿ ಮೊಟ್ಟೆ ಎಸೆದಿರಬಹುದು. ಯಾರಿಗೆ ಗೊತ್ತು?’ ಎಂದು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರತಿಭಟನೆ ನಡೆಸಲೆಂದೇ ವಿವಾದ ಸೃಷ್ಟಿಸಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯ ಸಿಗುತ್ತಿಲ್ಲ. ಹೀಗಾಗಿ, ಯಾವುದೇ ವಿಷಯ ಸಿಕ್ಕಿದರೂ ಪ್ರತಿಭಟನೆ ನಡೆಸುತ್ತಾರೆ. ಈಗ ಮೊಟ್ಟೆ ಸಿಕ್ಕಿದೆ’ ಎಂದರು.
‘ಪೊಲೀಸ್ ವೈಫಲ್ಯ ಎನ್ನಲಾಗದು. ಹತ್ತು ಜನರು ನಿಂತಿರುವಾಗ ಯಾರೋ ಒಬ್ಬ ಸಂದಿಯಿಂದ ಕಲ್ಲು, ಕೋಳಿ ಮೊಟ್ಟೆ ಎಸೆಯುವುದು ನಡೆಯುತ್ತಿರುತ್ತದೆ’ ಎಂದು ನುಡಿದರು.
‘ಮನಸ್ಸು ಮಾಡಿದರೆ ತಾನೂ ಬಿಜೆಪಿಯುವರು ಓಡಾಡದಂತೆ ಮಾಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳುವುದು ಸರಿಯಲ್ಲ. ಹೆದರಿಸುವ ತಂತ್ರವಾಗುತ್ತದೆ. ಅವರು ತಮ್ಮ ಪ್ರವಾಸದ ವೇಳಾಪಟ್ಟಿ ಕಳುಹಿಸಿಕೊಟ್ಟರೆ ಭದ್ರತೆಗೆ ವ್ಯವಸ್ಥೆ ಮಾಡಬಹುದು’ ಎಂದು ಹೇಳಿದರು.
‘ಕರ್ನಾಟಕ ರಾಜ್ಯ ಶಾಂತಯುತ ರಾಜಕಾರಣಕ್ಕೆ ಹೆಸರುವಾಸಿ. ಸಿದ್ದರಾಮಯ್ಯ ಅವರತ್ತ ಕೋಳಿ ಮೊಟ್ಟೆ ಎಸದಿರುವುದು ತಪ್ಪು. ಕಾನೂನು ಪ್ರಕಾರ ಕ್ರಮ ವಹಿಸಲಾಗುತ್ತದೆ’ ಎಂದರು.
‘ಕಾರ್ಯಕರ್ತರ ಮಟ್ಟದಲ್ಲಿ ಜಗಳ ನಡೆದಿರಬಹುದು. ಆದರೆ, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಈ ರೀತಿ ಮಾಡಬಾರದು’ ಎಂದು ತಿಳಿಸಿದರು.