ಕೆಜಿಎಫ್: ನೆರೆ ರಾಜ್ಯದಿಂದ ಗಾಂಜಾವನ್ನು ತಂದು ಗಡಿ ಭಾಗದಲ್ಲಿ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶದ ಮೂವರನ್ನು ರಾಬರ್ಟಸನ್ಪೇಟೆ ಪೊಲೀಸರು ಬಂಧಿಸಿ, ಅವರಿಂದ ಸುಮಾರು 5 ಲಕ್ಷ ಮೌಲ್ಯದ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕ್ಯಾಸಂಬಳ್ಳಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬುಧವಾರ ರಾಬರ್ಟಸನ್ಪೇಟೆ ಪೊಲೀಸರು ದಾಳಿ ಮಾಡಿದ್ದರು.
ಆಂಧ್ರಪ್ರದೇಶದ ಕುಪ್ಪಂ ತಾಲ್ಲೂಕಿನ ಅನಿಗಾನೂರು ನಿವಾಸಿ ವೆಂಕಟಾಚಲಪತಿ, ವಿಜಿಲಾಪುರ ಗ್ರಾಮದ ಹಂಸಗಿರಿ ಮತ್ತು ಕೆಂಚನಬಲ್ಲ ಗ್ರಾಮದ ನಿಖಿಲ್ ಎಂಬುವರನ್ನು ಬಂಧಿಸಿದರು. ಆವರಿಂದ 6 ಕೆಜಿ 340 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡರು. ಕೃತ್ಯಕ್ಕೆ ಬಳಸಿದ್ದ ಬೈಕನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ರಾಬರ್ಟಸನ್ಪೇಟೆ ಸಬ್ ಇನ್ಸ್ಪೆಕ್ಟರ್ ಯತೀಶ್, ಸಿಬ್ಬಂದಿಗಳಾದ ಗೋಪಿನಾಥ್, ಮಂಜುನಾಥ ರೆಡ್ಡಿ, ಬಸವರಾಜ ಕಾಂಬ್ಳೆ, ರಘು, ಮುರಳಿ ಮತ್ತು ಚಾಲಕ ಮನೋಹರ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.