ಕೆಜಿಎಫ್: ಪಡಿತರ ಪಡೆಯಲು ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ಜಾತಿ ಪ್ರಮಾಣಪತ್ರವನ್ನು ಜೋಡಣೆ ಮಾಡುವ ಆದೇಶ ಹಿನ್ನಲೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ಮಂಗಳವಾರ ನೂಕು ನುಗ್ಗಲು ಉಂಟಾಯಿತು.
ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನನ ಜತೆಗೆ ಪಟ್ಟಿಯಲ್ಲಿರುವ ಎಲ್ಲಾ ಸದಸ್ಯರ ಜಾತಿಪ್ರಮಾಣ ಪತ್ರವನ್ನು ಕೂಡ ಪಡಿತರ ಅಂಗಡಿಯಲ್ಲಿ ನೀಡಬೇಕೆಂದು ರೇಷನ್ ಅಂಗಡಿಯವರು ಹೇಳುತ್ತಿದ್ದಾರೆ. ಹಾಗಾಗಿ ಬೆಳಿಗ್ಗೆಯಿಂದಲೇ ಸರದಿಯಲ್ಲಿ ಅರ್ಜಿ ಸಲ್ಲಿಸಲು ನಿಂತಿದ್ದೇನೆ ಎಂಬುದು ಪಡಿತರದಾರರೊಬ್ಬರ ಮಾತಾಗಿದೆ.
ಕುಟುಂಬದ ಸದಸ್ಯರ ಹೆಸರನ್ನು ಕಡ್ಡಾಯವಾಗಿ ನೀಡಬೇಕೆಂದು ಪಡಿತರ ಅಂಗಡಿಯವರು ಒತ್ತಡ ಹೇರುತ್ತಿದ್ದಾರೆ. ಸರ್ವರ್ ಸಮಸ್ಯೆ ಕೂಡ ಇದೆ. ಇದರಿಂದಾಗಿ ಪಡಿತರದಾರರಲ್ಲಿ ಆತಂಕ ಉಂಟಾಗಿದೆ ಎಂಬುದು ಕಂದಾಯ ಅಧಿಕಾರಿಗಳ ಮಾತಾಗಿದೆ.
ನಗರದಲ್ಲಿ ಒಟ್ಟು 20,446 ಪಡಿತರ ಕಾರ್ಡ್ದಾರರಿದ್ದಾರೆ. ಅದರಲ್ಲಿ 893 ಅಂತ್ಯೋದಯ ಕಾರ್ಡ್ದಾರರಿದ್ದಾರೆ. 2,138 ಕಾರ್ಡ್ದಾರರು ರಾಜ್ಯ ಸರ್ಕಾರ ನೀಡುವ ಹೆಚ್ಚುವರಿ ಪಡಿತರ ಪಡೆಯುತ್ತಿದ್ದಾರೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಹೇಳಿದ್ದಾರೆ.
ಪಡಿತರದಾರು ಕಡ್ಡಾಯವಾಗಿ ತಮ್ಮ ಕುಟುಂಬದ ಸದಸ್ಯರ ಹೆಸರನ್ನು ಪಡಿತರ ಅಂಗಡಿಯವರಿಗೆ ಕೊಟ್ಟು ಜೋಡಣೆ ಮಾಡಿಸಬೇಕು ಎಂಬುದು ಎಲ್ಲೂ ಕಡ್ಡಾಯ ಮಾಡಿಲ್ಲ. ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅದನ್ನೇ ಪಡಿತರ ಅಂಗಡಿಯವರಿಗೆ ತಿಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.