ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಜಿಲ್ಲೆಯಲ್ಲಿ ಬಿಜೆಪಿ ಸಂಸದರೂ ಇಲ್ಲ, ಶಾಸಕರೂ ಇಲ್ಲ!

ಪಕ್ಷ ಸಂಘಟನೆ ಹೇಗೆ, ಮುಂದಾಳತ್ವ ವಹಿಸುವವರು ಯಾರು–ಕಾರ್ಯಕರ್ತರ ಸಂಕಟ
Published 11 ಜೂನ್ 2024, 7:44 IST
Last Updated 11 ಜೂನ್ 2024, 7:44 IST
ಅಕ್ಷರ ಗಾತ್ರ

ಕೋಲಾರ: ಮೈತ್ರಿ ಧರ್ಮ ಪಾಲನೆಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರದ ಟಿಕೆಟ್‌ ಅನ್ನು ಜೆಡಿಎಸ್‌ಗಾಗಿ ತ್ಯಾಗ ಮಾಡಿದ್ದ ಬಿಜೆಪಿಗೆ ಈಗ ಕೋಲಾರ ಜಿಲ್ಲೆಯಲ್ಲಿ ಪ್ರಾತಿನಿಧ್ಯವೇ ಇಲ್ಲದೆ ಅಸ್ವಿತ್ವ ಕಳೆದುಕೊಳ್ಳುವ ಭಯ ಮೂಡಲಾರಂಭಿಸಿದೆ.

ಇಡೀ ಜಿಲ್ಲೆಯಲ್ಲಿ ಈಗ ಬಿಜೆಪಿಯ ಒಬ್ಬ ಶಾಸಕನೂ ಇಲ್ಲ, ಸಂಸದರೂ ಇಲ್ಲ. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದ ಜಿಲ್ಲೆಯ ವೈ.ಎ.ನಾರಾಯಣಸ್ವಾಮಿ ಕೂಡ ಈ ಬಾರಿ ಸೋಲು ಕಂಡಿದ್ದಾರೆ. 2028ರ ವಿಧಾನಸಭೆ ಚುನಾವಣೆ ನಡೆಯುವವರೆಗೆ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ಇರಲಿದೆ.

ಸಹಜವಾಗಿಯೇ ಈ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಆಗಬಹುದೆಂಬ ಚಿಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಡುತ್ತಿದೆ. ಪಕ್ಷ ಸಂಘಟನೆ ಹೇಗೆ, ಮುಂದಾಳತ್ವ ವಹಿಸುವವರು ಯಾರು, ಕಾರ್ಯಕರ್ತರ ನೋವು ಕೇಳುವವರಾರು ಎಂಬ ಆತಂಕ ಹಲವರಲ್ಲಿ ಮನೆ ಮಾಡಿದೆ.

ಈ ಬಾರಿ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಬಲದಿಂದ ಎಂ.ಮಲ್ಲೇಶ್‌ ಬಾಬು ಗೆದ್ದಿದ್ದಾರೆ. ಆದರೆ, ಅವರು ವಾಸ್ತವವಾಗಿ ಜೆಡಿಎಸ್‌ ಸಂಸದ. ಸಹಜವಾಗಿ ಅದು ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರಿಗೆ ಹೆಚ್ಚು ಖುಷಿ ತಂದಿದೆ. ಪಕ್ಷ ಸಂಘಟನೆ ಪುಷ್ಟಿ ನೀಡಿದೆ. ಗೆಲುವಿನಲ್ಲಿ ಒಂದು ಭಾಗವಾಗಿದ್ದರೂ ಪಕ್ಷ ಸಂಘಟನೆ ವಿಚಾರದಲ್ಲಿ ಅದೇ ಮಾತನ್ನು ಬಿಜೆಪಿಗೆ ಹೇಳಲಾಗದು.

ಹಿಂದೆ ಕೃಷ್ಣಯ್ಯ ಶೆಟ್ಟಿ, ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ವೈ.ಸಂಪಂಗಿ, ವೈ.ರಾಮಕ್ಕ ಶಾಸಕರಾಗಿದ್ದರು. ಆಗ ಬಿಜೆಪಿಗೆ ಬಲವಿತ್ತು, ಧ್ವನಿ ಇತ್ತು. 2019ರಿಂದ 2024ರವರೆಗೆ ಬಿಜೆಪಿ ಸಂಸದರೇ ಇದ್ದರು. ಅದು ಕ್ಷೇತ್ರದ ಇತಿಹಾಸದಲ್ಲಿ ಬಿಜೆಪಿಗೆ ದೊರೆತ ಚೊಚ್ಚಲ ಗೆಲುವು ಕೂಡ. ಹೀಗಾಗಿ, ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಉತ್ಸಾಹ ನೆಲೆಸಿತ್ತು. ಸಂಸದರಾಗಿದ್ದ ಎಸ್‌.ಮುನಿಸ್ವಾಮಿ ಬಿಜೆಪಿ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಜೊತೆಗೆ ಹಲವು ವಿವಾದಗಳಿಂದ ಸದ್ದು ಮಾಡಿದ್ದರು. ವೇದಿಕೆ ಮೇಲೆ ಹಾಗೂ ಹೊರಗೆ ಕಾಂಗ್ರೆಸ್‌ ಶಾಸಕರೊಂದಿಗೆ ಸಂಘರ್ಷಕ್ಕೆ ಇಳಿದಿದ್ದು ದೊಡ್ಡ ಸುದ್ದಿಯೂ ಆಗಿತ್ತು. ಹಾಗೆಯೇ ಅಂತರಗಂಗೆ ಬೆಟ್ಟದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಯೋಜನೆ, ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಬೃಹತ್‌ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದರು.

ಈ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಬಿಜೆಪಿ ವರಿಷ್ಠರು, ಮುನಿಸ್ವಾಮಿ ಹಾಗೂ ಕೋಲಾರದ ಮುಖಂಡರು ಬಹಳಷ್ಟು ಕಸರತ್ತು ನಡೆಸಿದ್ದರು. ಆ ನಿಟ್ಟಿನಲ್ಲಿ ಯಶಸ್ಸು ಸಿಗಲಿಲ್ಲ. ಈಗ ಸಂಘಟನೆ ವಿಚಾರದಲ್ಲಿ ಮುಖಂಡರು, ಕಾರ್ಯಕರ್ತರು ತಲೆಕೆಡಿಸಿಕೊಂಡಿದ್ದಾರೆ. ದಿಕ್ಕಿಲ್ಲದ ಪರಿಸ್ಥಿತಿ ಎದುರಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ (ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಹಾಗೂ ಚಿಂತಾಮಣಿ ಕ್ಷೇತ್ರ ಸೇರಿ) ಒಬ್ಬ ಬಿಜೆಪಿ ಶಾಸಕರೂ ಇಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಎದುರು ಕೇವಲ 257 ಮತಗಳಿಂದ ಮಂಜುನಾಥಗೌಡ ಸೋಲು ಕಂಡಿದ್ದರು. ಕೆಜಿಎಫ್‌ ಹಾಗೂ ಕೋಲಾರದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು.

2019ರ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಮೊದಲ ಬಾರಿ ಲಭಿಸಿದ ಗೆಲುವು ಬಿಜೆಪಿ ಕಾರ್ಯಕರ್ತರ ವಿಶ್ವಾಸ ಹೆಚ್ಚಿಸಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ಅವರ ಸತತ ಏಳು ಬಾರಿಯ ಗೆಲುವಿನ ನಾಗಾಲೋಟವನ್ನು ಮುನಿಸ್ವಾಮಿ ಮೊದಲ ಯತ್ನದಲ್ಲೇ ತಡೆದಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಶೂನ್ಯ ಸಾಧನೆ ಮಾಡಿತ್ತು. ಕಾಂಗ್ರೆಸ್‌, ಜೆಡಿಎಸ್‌ನ ಭದ್ರಕೋಟೆ ಎನಿಸಿರುವ ಜಿಲ್ಲೆಯ ಕೋಲಾರ, ಮುಳಬಾಗಿಲು ಹಾಗೂ ಶ್ರೀನಿವಾಸಪುರ ಕ್ಷೇತ್ರದಲ್ಲಿ ಒಮ್ಮೆಯೂ ‘ಕಮಲ’ ಅರಳಿಲ್ಲ. ಮಾಲೂರಿನಲ್ಲಿ ಎರಡು ಬಾರಿ, ಕೆಜಿಎಫ್‌ನಲ್ಲಿ ಎರಡು ಬಾರಿ ಹಾಗೂ ಬಂಗಾರಪೇಟೆಯಲ್ಲಿ ಉಪಚುನಾವಣೆ ಸೇರಿದಂತೆ ಎರಡು ಬಾರಿ ಜಯ ಗಳಿಸಿದೆ. ಕೋಲಾರ ಕ್ಷೇತ್ರದಲ್ಲಿ 2008 ಹಾಗೂ 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ವರ್ತೂರು ಪ್ರಕಾಶ್‌ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಹೂಡಿ ವಿಜಯಕುಮಾರ್‌ ಬೆಂಬಲ ನೀಡಿದ್ದರೂ ಮಾಲೂರು ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಮಾಜಿ ಶಾಸಕ ಮಂಜುನಾಥ್‌ ಗೌಡ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದು ಆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೂ ತೊಡಕಾಗಿದೆ.

ಬಂಗಾರಪೇಟೆ ಕ್ಷೇತ್ರದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ವಿ.ಮಹೇಶ್‌ ನೇತೃತ್ವದಲ್ಲಿ ಸಂಘಟನೆ ನಡೆಯುತ್ತಿದೆ. ಆದರೆ, ಎಸ್‌.ಮುನಿಸ್ವಾಮಿ 2028ರಲ್ಲಿ ಈ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ವಿಚಾರ ಈಗಲೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಇನ್ನು ಕೆಜಿಎಫ್‌ನಲ್ಲಿ ಕಳೆದ ಎರಡೂ ಚುನಾವಣೆಗಳಲ್ಲಿ ಬಿಜೆಪಿ ಪರಾಭವಗೊಂಡಿದೆ. ವೈ.ಸಂಪಂಗಿ ಹಾಗೂ ಅವರ ಪುತ್ರಿ ಅಶ್ವಿನಿ ಸಂಪಂಗಿ ಆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ನಡೆಸುತ್ತಿರುವ ಪ್ರಯತ್ನ ಸಾಕಾಗುತ್ತಿಲ್ಲ.

ಕೋಲಾರ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ವರ್ತೂರು ಪ್ರಕಾಶ್‌ ಈಗ ಬೆಂಗಳೂರು ಸೇರಿಕೊಂಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ವಿವಿಧ ಕಾರ್ಯಕ್ರಮಗಳ ಮೂಲಕ ಸಂಘಟನೆಯಲ್ಲಿ ತೊಡಗಿದ್ದಾರೆ. ಇನ್ನು ಮುಳಬಾಗಿಲು ಹಾಗೂ ಶ್ರೀನಿವಾಸಪುರದಲ್ಲಿ ಬಿಜೆಪಿ ಸಂಘಟನೆ ಬಹಳ ದುರ್ಬಲವಾಗಿದೆ.

ಕ್ಷೇತ್ರದಲ್ಲೇ ಇದ್ದು ಪಕ್ಷ ಸಂಘಟನೆ ಮಾಡುವುದಾಗಿ ಈಚೆಗೆ ಮಾಜಿ ಸಂಸದ ಮುನಿಸ್ವಾಮಿ ಹೇಳಿದ್ದರು. ಕಾರ್ಯಕರ್ತರು ಮಾತ್ರ ಆಸರೆಗಾಗಿ ಕಾದಿದ್ದಾರೆ. ಇಂಥ ಸನ್ನಿವೇಶದಲ್ಲಿ ಬಿಜೆಪಿಯ ಮುಂದಿನ ಹೆಜ್ಜೆಗಳು ಭಾರಿ ಕುತೂಹಲ ಮೂಡಿಸಿವೆ. 

‘ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ’

ಕೋಲಾರ ಜಿಲ್ಲೆಯಲ್ಲಿ ಶಾಸಕರು ಸಂಸದರು ಇಲ್ಲದಿದ್ದರೂ ಕೇಂದ್ರದಲ್ಲಿ ಮೋದಿ ನೇತೃತ್ವದ ನಮ್ಮದೇ ಸರ್ಕಾರವಿದೆ. ಹೀಗಾಗಿ ಸಂಘಟನೆಗೆ ಭಯವಿಲ್ಲ. ನಮ್ಮದು ಕಾರ್ಯಕರ್ತರಿಂದ ಕೂಡಿದ ಪಕ್ಷ. ಬೂತ್‌ ಸಮಿತಿ ಇದೆ ಜೊತೆಗೆ ಮಂಡಲ ಅಧ್ಯಕ್ಷರು ಮಾಜಿ ಶಾಸಕರು ಮಾಜಿ ಸಂಸದರು ಇದ್ದಾರೆ. ಕೇಂದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸುತ್ತೇವೆ. ಅದು ಮುಂದೆ ಪಕ್ಷದ ಸಂಘಟನೆ ಹಾಗೂ ಚುನಾವಣೆಗಳಿಗೆ ಸಹಾಯವಾಗಲಿದೆ.

ವಿಧಾನಸಭೆ ಚುನಾವಣೆಗೆ ಮುನ್ನವೇ ಮೈತ್ರಿ ಆಗಿದ್ದರೆ ಜಿಲ್ಲೆಯಲ್ಲಿ ಎಲ್ಲೂ ಕಾಂಗ್ರೆಸ್‌ ಗೆಲ್ಲುತ್ತಿರಲಿಲ್ಲ. ಈಗ ಜೆಡಿಎಸ್‌ನೊಂದಿಗಿನ ಮೈತ್ರಿ ಬಲವಿದೆ. ಸಂಟನಾತ್ಮಕವಾಗಿ ಪಕ್ಷ ಕಟ್ಟುತ್ತೇವೆ. ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಗೆಲ್ಲುವ ಭರವಸೆ ಇದೆ. –ಡಾ.ಕೆ.ಎನ್‌.ವೇಣುಗೋಪಾಲ್‌ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT