2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕುರುಡುಮಲೆ ಗಣೇಶನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ‘ಪಂಚರತ್ನ’ ಯಾತ್ರೆಗೆ ಚಾಲನೆ ನೀಡಿದ್ದ ಕ್ಷಣ
2023ರ ಸೆಪ್ಟೆಂಬರ್ನಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಕುರುಡುಮಲೆ ಗಣೇಶನಿಗೆ ಪೂಜೆ ಸಲ್ಲಿಸಿ ಲೋಕಸಭೆ ಚುನಾವಣೆ ಸಿದ್ಧಗೆ ಚಾಲನೆ ನೀಡಿದ್ದ ಸಂದರ್ಭ
‘ಪ್ರಜಾಧ್ವನಿ–2’ಗೆ ಇಂದು ಚಾಲನೆ: ಕಾಂಗ್ರೆಸ್ ‘ಪ್ರಜಾಧ್ವನಿ–2’ ಯಾತ್ರೆ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ದೇಗುಲದಲ್ಲಿ ಶನಿವಾರ ಬೆಳಿಗ್ಗೆ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಲೋಕಸಭೆ ಚುನಾವಣೆ ಪ್ರಚಾರ ಕಹಳೆ ಮೊಳಗಿಸಲಿದ್ದಾರೆ. ಬಳಿಕ ಮುಳಬಾಗಿಲು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಾರ್ಚ್ 29ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಕೋಲಾರ ಕ್ಷೇತ್ರದ ಟಿಕೆಟ್ ಬಿಕ್ಕಟ್ಟಿನಿಂದಾಗಿ ಮುಂದೂಡಲಾಗಿತ್ತು. ‘ಕರ್ನಾಟಕಕ್ಕೆ ‘ದೇವಮೂಲೆ’ ಕುರುಡುಮಲೆ. ಹೀಗಾಗಿ ರಾಜ್ಯಕ್ಕೂ ಒಳ್ಳೆಯದಾಗಬೇಕು. ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಬೇಕೆಂದು ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸುತ್ತಿದ್ದೇವೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.
ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಈಚೆಗೆ ಕುರುಡುಮಲೆಯಲ್ಲಿ ಪೂಜೆ ಸಲ್ಲಿಸಿ ತಮ್ಮ ಪ್ರಚಾರ ಆರಂಭಿಸಿದರು
ಕುರುಡುಮಲೆ ಇತಿಹಾಸ
ಮುಳುಬಾಗಿಲಿನಿಂದ 11ಕಿ.ಮೀ ದೂರದಲ್ಲಿರುವ ಕುರುಡುಮಲೆಗೆ ಬಹುತೇಕ ಶಾಸನಗಳಲ್ಲಿ ‘ಕುರುಡಿಮಲ’ ಎಂಬ ಹೆಸರಿದೆ. ಚೋಳರ ಆಳ್ವಿಕೆಯಲ್ಲಿ ಮಹತ್ವ ಪಡೆದ ಊರಿದು. ಗಣೇಶನನ್ನು ಆರಾಧಿಸಲು ದೇವದೇವತೆಗಳು ಕೂಡಿದ್ದರಿಂದ ‘ಕೂಡಿಮಲೆ’ ‘ಕೂಡುಮಲೈ’ ಎಂಬ ಹೆಸರು ಬಂದಿದೆ ಎಂಬುದು ಪ್ರತೀತಿ. ಗಣಪತಿ ದೇಗುಲ ವಿಜಯನಗರ ಕಾಲದ ವಾಸ್ತುಶೈಲಿ ಹೊಂದಿದೆ. ಸಾಲಿಗ್ರಾಮ ಶಿಲೆಯ ಲಕ್ಷಣಗಳಿರುವ ಗಣಪತಿಯನ್ನು ಮೂರು ಅಡಿ ಎತ್ತರದ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಗಣೇಶನ ವಿಗ್ರಹವು ಎಂಟೂವರೆ ಅಡಿ ಎತ್ತರವಿದೆ. ರಾಜ್ಯದ ಏಕಶಿಲಾ ಗಣಪತಿ ವಿಗ್ರಹಗಳಲ್ಲಿ ಇದೂ ಒಂದು ಎಂದು ಇತಿಹಾಸ ತಜ್ಞ ಶಿವಪ್ಪ ಅರಿವು ಹೇಳುತ್ತಾರೆ.