ಕೋಲಾರ: ಹವಾಮಾನ ವೈಪರೀತ್ಯ ಕಾರಣ ಸತತ ಮೂರು ವರ್ಷಗಳಿಂದ ನಷ್ಟಕ್ಕೆ ಒಳಗಾಗುತ್ತಿರುವ ಜಿಲ್ಲೆಯ ಮಾವು ಬೆಳೆಗಾರರು ಈ ಬಾರಿ ಬಿಸಿಲ ಧಗೆ ಕಾರಣ ಭಾರಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ. ಈ ಬಾರಿ ಮಳೆ ಕೊರತೆ ಹಾಗೂ ಹೆಚ್ಚಿದ ಉಷ್ಣಾಂಶದಿಂದ 39,331 ಹೆಕ್ಟೇರ್ ಪ್ರದೇಶದಲ್ಲಿ ಶೇ 70ರಷ್ಟು ಮಾವು ಇಳುವರಿ ಕುಂಠಿತವಾಗಿದೆ.
ಈ ಸಂಬಂಧ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ನಡಿ ₹ 88.49 ಕೋಟಿ ಪರಿಹಾರ ಕೋರಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಮೇ 15ರಂದು ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಅದರಲ್ಲಿ ಶೇ 50ರಷ್ಟು ಮಾವನ್ನು ಕೋಲಾರ ಜಿಲ್ಲೆಯಲ್ಲೇ ಬೆಳೆಯುತ್ತಾರೆ. ಪ್ರಮುಖವಾಗಿ ಶ್ರೀನಿವಾಸಪುರ ತಾಲ್ಲೂಕಿನ ಬಹುತೇಕ ರೈತರು ಮಾವು ಬೆಳೆ ಮೇಲೆ ಅವಲಂಬಿತರಾಗಿ ಬದುಕು ಸಾಗಿಸುತ್ತಾರೆ. ‘ಮಾವಿನ ನಗರಿ’ ಎಂದೇ ಪ್ರಸಿದ್ಧಿ ಪಡೆದಿದೆ.
ಸಮರ್ಪಕ ಮಳೆ ಬಾರದ ಕಾರಣ ಈ ಬಾರಿ ಹೂ ಹಂತದಲ್ಲೇ ಮಾವಿನ ಫಸಲು ಉದುರಿತ್ತು. ಡಿಸೆಂಬರ್ ತಿಂಗಳಿನಲ್ಲಿ ಬರಬೇಕಿದ್ದ ಹೂವು ಜನವರಿ, ಫೆಬ್ರುವರಿ ತಿಂಗಳಲ್ಲಿ ಬಂದಿತ್ತು. ಫಸಲು ತಡವಾಗುವುದರ ಜೊತೆಗೆ ರಣ ಬಿಸಿಲಿನ ತಾಪಕ್ಕೆ ಕಾಯಿ ಆಗಬೇಕಿದ್ದ ಪಿಂದೆ, ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಉದುರಿದೆ. ತುಸು ದೊಡ್ಡದಾಗಿ ಬಲಿತಿರುವ ಮಾವಿನ ಕಾಯಿ ನೀರಿನ ಅಂಶ ಸಿಗದೆ ಬಿಸಿಲ ತಾಪಕ್ಕೆ ಸೊರಗಿದೆ. ಈ ಹಿನ್ನೆಲೆಯಲ್ಲಿ ಮಾವಿನ ತಾಕುಗಳಿಗೆ ಅಧಿಕಾರಿಗಳ ತಂಡ ಕಳುಹಿಸಿ ಪರಿಶೀಲಿಸಿ ನೆರವಿಗೆ ಬರಬೇಕೆಂದು ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು ಹಾಗೂ ಬೆಳೆಗಾರರು ಮನವಿ ಮಾಡಿದ್ದರು.
‘ಮಾವಿನ ಗಿಡ ಹೂ ಬಿಡುವ ಹಾಗೂ ಕಾಯಿ ಕಚ್ಚುವ ಸಂದರ್ಭದಲ್ಲಿ ವಾಡಿಕೆಯಂತೆ ಮಳೆಯಾಗದೆ, ಉಷ್ಣಾಂಶ ಹೆಚ್ಚಿದ್ದರಿಂದ 2023–24ನೇ ಸಾಲಿನ ಹಂಗಾಮಿನಲ್ಲಿ ಶೇ 70ರಿಂದ 80ರಷ್ಟು ಇಳುವರಿ ಕುಂಠಿತವಾಗಿದೆ. ಅಲ್ಲದೇ, ಇನ್ನುಳಿದ ಪ್ರದೇಶದಲ್ಲಿ ಮಾವಿನ ಕಾಯಿಗಳ ಗಾತ್ರ ಕಡಿಮೆಯಾಗಿ ಗುಣಮಟ್ಟ ಕಳೆದುಕೊಂಡಿದ್ದು, ಮಾರುಕಟ್ಟೆಗ ಸೂಕ್ತ ಇಲ್ಲದಿರುವ ಕಾರಣ ರೈತರು ಪರಿಹಾರ ಕೋರಿ ತೋಟಗಾರಿಕೆ ಇಲಾಖೆಗೆ ಮನವಿ ಸಲ್ಲಿಸಿದ್ದರು’ ಎಂದು ಅಕ್ರಂ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಂಟಿ ಸಮೀಕ್ಷೆಗೆ ತಂಡ ರಚಿಸಿ ವರದಿ ನೀಡಲು ಸೂಚಿಸಲಾಗಿತ್ತು. ತೋಟಗಾರಿಕೆ ಮಹಾವಿದ್ಯಾಲಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಮಾವು ಬೆಳೆ ಹಾನಿ ಪರಿಶೀಲಿಸಿ ವರದಿ ನೀಡಿತ್ತು. ನಷ್ಟದ ಪ್ರತಿ ಹೆಕ್ಟೇರ್ಗೆ ₹ 22,500ರಂತೆ ಪರಿಹಾರ ನೀಡಲು ಕೋರಲಾಗಿದೆ’ ಎಂದರು.
ಜಂಟಿ ಸಮೀಕ್ಷೆಗೆ ತಂಡವು ಶ್ರೀನಿವಾಸಪುರ, ಕೋಲಾರ ಹಾಗೂ ಮುಳಬಾಗಿಲು ತಾಲ್ಲೂಕಿನ 12 ರೈತರ ಮಾವು ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಹೂ, ಕಾಯಿ ಉದುರುವ ಜೊತೆಗೆ ಮರಗಳ ಬೆಳವಣಿಗೆ ಮೇಲೂ ಪರಿಣಾಮ ಬೀರುವ ಸನ್ನಿವೇಶ ಸೃಷ್ಟಿಯಾಗಿದೆ. ಮಾವಿನ ತೋಟ ಗುತ್ತಿಗೆ ಆಧಾರದಲ್ಲಿ ವ್ಯಾಪಾರ ಮಾಡಿರುವ ಸಣ್ಣಪುಟ್ಟ ವ್ಯಾಪಾರಸ್ಥರೂ ಕೈ ಸುಟ್ಟುಕೊಂಡಿದ್ದಾರೆ.
ಕಳೆದ ವರ್ಷ ಮಳೆ ಹೆಚ್ಚಿದ ಕಾರಣ ನಷ್ಟ ಉಂಟಾಗಿತ್ತು. ಈ ಬಾರಿ ಬಿಸಿಲಿನ ತಾಪಕ್ಕೆ ಹೂ ಹಾಗೂ ಪಿಂದೆಗಳು ಉದುರಿದ್ದು ಗಮನಿಸಿದರೆ 10 ಟನ್ ಬರುತ್ತಿದ್ದ ಮಾವಿನ ಫಸಲು ಈ ಬಾರಿ 1ರಿಂದ 2 ಟನ್ ಸಿಗುವುದು ಕಷ್ಟವಾಗಿದೆ ಎಂದು ಬೆಳೆಗಾರರು ಹೇಳಿದ್ದಾರೆ.
ಬೆಳೆ ಉಳಿಸಿಕೊಳ್ಳಲು ಒಂದೂವರೆ ತಿಂಗಳಿಂದ ಔಷಧಿ ಸಿಂಪಡಣೆ ಸೇರಿದಂತೆ ಇನ್ನಿತರೆ ಕಸರತ್ತು ನಡೆಸುತ್ತಿದ್ದು, ಸಾಲ ಮಾಡಿಕೊಂಡಿದ್ದೇವೆ. ಶೀಘ್ರವೇ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ತಾಪಮಾನ ಹೆಚ್ಚಿದ್ದರಿಂದ ಮಾವಿನ ಗಿಡ ಹೂ ಬಿಡದೆ ಕಾಯಿ ಕಚ್ಚದೆ ಇಳುವರಿ ತಗ್ಗಿದ್ದು ರೈತರಿಗೆ ನಷ್ಟವಾಗಿದೆ. ನೈಸರ್ಗಿಕ ವಿಕೋಪ ಬಾಧಿತ ಪ್ರದೇಶವೆಂದು ಪರಿಹಾರ ಕೋರಲಾಗಿದೆ
- ಅಕ್ರಂ ಪಾಷಾ ಜಿಲ್ಲಾಧಿಕಾರಿ
ಕೋಲಾರ ಜಿಲ್ಲೆಯಲ್ಲಿ ಮಾವು ಬೆಳೆ ನಷ್ಟ
ಪ್ರದೇಶ ಪರಿಹಾರಕ್ಕೆ ಕೋರಿರುವ ಮಾಹಿತಿ ತಾಲ್ಲೂಕು; ನಷ್ಟ (ಹೆಕ್ಟೇರ್); ಪರಿಹಾರ (₹ ಲಕ್ಷಗಳಲ್ಲಿ) ಬಂಗಾರಪೇಟೆ; 30703; 69.08 ಕೆಜಿಎಫ್; 1513.85; 340.62 ಕೋಲಾರ; 5670.18; 1275.79 ಮಾಲೂರು; 1561.16; 351.28 ಮುಳಬಾಗಿಲು; 7285.50; 1639.24 ಶ್ರೀನಿವಾಸಪುರ; 22993.45; 5173.53 ಒಟ್ಟು; 39331.27; 8849.54 * ಪ್ರತಿ ಹೆಕ್ಟೇರ್ಗೆ ₹ 22500 ರಂತೆ ಪರಿಹಾರ
ಸಮೀಕ್ಷೆಗೆ ನಿಯೋಜಿಸಿದ್ದ ಜಂಟಿ ತಂಡ ನೀಡಿದ ವರದಿ ಏನು?
* ಜಿಲ್ಲೆಯಲ್ಲಿ ಡಿಸೆಂಬರ್–ಜನವರಿ ತಿಂಗಳು ಮಾವು ಹೂ ಬಿಡುವ ಸಮಯ. ಈ ಋತುಮಾನದಲ್ಲಿ ಹೂ ಬಿಡುವ ಅವಧಿ ಮಾರ್ಚ್ವರೆಗೆ ಇತ್ತು
* ಮಾವಿನ ಗಿಡ ವಿವಿಧ ಹಂತಗಳಲ್ಲಿ ಹೂ ಬಿಟ್ಟಿದ್ದರಿಂದ ಹಾಗೂ ತಾಪಮಾನ ಹೆಚ್ಚಿದ್ದರಿಂದ (36ರಿಂದ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ) ಉದುರಿದ ಹೂ
* ತಾಪಮಾನ ಹೆಚ್ಚಳದಿಂದ ಜಿಗಿಹುಳು ಬಾಧೆ ಆವರಿಸಿ ಉದುರಿದ ಹೂ
* ಹೂ ಉದುರಿದ್ದು ಹಾಗೂ ಕೆಲವೆಡೆ ಮಾವಿನ ಕಾಯಿ ಹಳದಿ ಬಣಕ್ಕೆ ತಿರುಗಿ ಉದುರಿದ್ದರಿಂದ ಇಳುವರಿ ಕುಂಠಿತ
* ಕೆಲ ರೈತರ ತೋಟಗಳಲ್ಲಿ ಪಶ್ಚಿಮ ದಿಕ್ಕಿನ ಭಾಗದಲ್ಲಿ ಮಾವಿನ ಕಾಯಿಗಳ ಮೇಲೆ ಸುಟ್ಟಿರುವ ರೀತಿ ಮಚ್ಚೆ
* ತೇವಾಂಶ ಕೊರತೆಯಿಂದ ತಗ್ಗಿದ ಮಾವಿನ ಕಾಯಿ ಗಾತ್ರ. ಕೆಲ ಗಿಡಗಳ ಕೊಂಬೆ ಒಣಗಿದೆ
* ಈ ಬಾರಿ ಕೇವಲ ಶೇ 20ರಿಂದ 25ರಷ್ಟು ಮಾವು ಇಳುವರಿ ಸಾಧ್ಯತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.