ಮಾಲೂರು: ‘ಸ್ವಾಮಿ ವಿವೇಕಾನಂದರು ಯುವಜನರ ಪಾಲಿನ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷ ಆರ್. ಪ್ರಭಾಕರ್ ತಿಳಿಸಿದರು.
ಪಟ್ಟಣದ ಬಸ್ನಿಲ್ದಾಣ ಬಳಿಯ ಉದ್ಯಾನದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ತಾಲ್ಲೂಕು ಬಿಜೆಪಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದ ಅಂಗವಾಗಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ವಿವೇಕಾನಂದರ ಹೆಸರು ಕೇಳಿದರೆ ಮೈಯೆಲ್ಲಾ ಪುಳಕಗೊಳ್ಳುತ್ತದೆ. ಅವರು ಭಾರತ ಕಂಡ ಹೆಮ್ಮೆಯ ಪುತ್ರ. ಅವರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಭಾರತದ ಆಧ್ಯಾತ್ಮಿಕ ಪಿತಾಮಹ ಸ್ವಾಮಿ ವಿವೇಕಾನಂದರು ಎಂದರೆ ತಪ್ಪಾಗಲಾರದು ಎಂದರು.
1893ರಲ್ಲಿ ಚಿಕಾಗೋದಲ್ಲಿ ವಿವೇಕಾನಂದರು ಮಾಡಿದ ಭಾಷಣ ಇಂದಿಗೂ ವಿಖ್ಯಾತಿ ಪಡೆದಿದೆ. ಅಂದು ‘ಅಮೆರಿಕದ ನನ್ನ ಸಹೋದರ, ಸಹೋದರಿಯರೇ...’ ಎನ್ನುತ್ತಲೇ ಮಾತು ಆರಂಭಿಸಿದ್ದರು. ಭಾರತೀಯ ಸಂಸ್ಕೃತಿ, ಸಿರಿವಂತಿಕೆ, ಜ್ಞಾನ, ಧರ್ಮ ಇವೆಲ್ಲದರ ವಿರಾಟ್ ರಾಯಭಾರಿಯಂತೆ ಕಂಡಿದ್ದರು ಎಂದು ಹೇಳಿದರು.
ಮುಖಂಡರಾದ ಹೂಡಿ ವಿಜಯಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಎಂ. ರಾಮಮೂರ್ತಿ, ತಬಲ ನಾರಾಯಣಪ್ಪ, ಮಹಿಳಾ ಮೋರ್ಚಾ ತಾಲ್ಲೂಕು ಅಧ್ಯಕ್ಷೆ ಪದ್ಮಾವತಿ ಹಾಜರಿದ್ದರು.