ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: 57 ಹೆಕ್ಟೇರ್‌ ಬೆಳೆ ನಷ್ಟ, ಅನ್ನದಾತರಿಗೆ ಸಂಕಷ್ಟ

ನಿವಾರ್‌ ಚಂಡಮಾರುತ: ಅಕಾಲಿಕ ಮಳೆಗೆ ನೆಲಕಚ್ಚಿದ ಬೆಳೆ
Last Updated 27 ನವೆಂಬರ್ 2020, 15:32 IST
ಅಕ್ಷರ ಗಾತ್ರ

ಕೋಲಾರ: ‘ನಿವಾರ್‌’ ಚಂಡಮಾರುತದ ಕಾರಣಕ್ಕೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಸುಮಾರು 57 ಹೆಕ್ಟೇರ್‌ ಪ್ರದೇಶದಲ್ಲಿನ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನಾಶವಾಗಿವೆ.

ಜಿಲ್ಲೆಯ 6 ತಾಲ್ಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಿಗ್ಗೆವರೆಗೆ 24 ತಾಸಿನಲ್ಲಿ 47.3 ಮಿಲಿ ಮೀಟರ್‌ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದ ಒಟ್ಟಾರೆ 51.20 ಹೆಕ್ಟೇರ್‌ ತೋಟಗಾರಿಕೆ ಬೆಳೆ ಮತ್ತು 5.46 ಹೆಕ್ಟೇರ್‌ ಕೃಷಿ ಬೆಳೆಗಳು ನೆಲಕಚ್ಚಿವೆ.

ಮಳೆಯು ಮುಖ್ಯವಾಗಿ ತರಕಾರಿ ಬೆಳೆಗೆ ದೊಡ್ಡ ಪೆಟ್ಟು ಕೊಟ್ಟಿದ್ದು, 28.20 ಹೆಕ್ಟೇರ್‌ ಪ್ರದೇಶದಲ್ಲಿನ ವಿವಿಧ ತರಕಾರಿ ಬೆಳೆ ನಾಶವಾಗಿವೆ. ಮಳೆ ಮತ್ತು ಗಾಳಿಯ ತೀವ್ರತೆಗೆ ಪಪ್ಪಾಯ (ಪರಂಗಿ) ಹಾಗೂ ಬಾಳೆ ಗಿಡಗಳು ಧರೆಗುರುಳಿವೆ. ಟೊಮೆಟೊ, ಬೀನ್ಸ್‌, ವೀಳ್ಯದೆಲೆ, ಚಿಕಡಿ ಕಾಯಿ ಬೆಳೆಗಳು ನೆಲಕಚ್ಚಿವೆ.

ಅಲ್ಲದೇ, ಟೊಮೊಟೊ, ದಪ್ಪ ಮೆಣಸಿನಕಾಯಿ, ಸೌತೆಕಾಯಿ, ಕ್ಯಾರೆಟ್‌, ಹಾಗಲಕಾಯಿ, ಭತ್ತ, ತೊಗರಿ, ಮುಸುಕಿನ ಜೋಳ, ರಾಗಿ ಬೆಳೆಗೆ ಹಾನಿಯಾಗಿದೆ. ಕೆಜಿಎಫ್‌ ತಾಲ್ಲೂಕಿನ ವಡ್ಡಹಳ್ಳಿ, ಮೋತಕಪಲ್ಲಿ, ಮುಳಬಾಗಿಲು ತಾಲ್ಲೂಕಿನ ಬೈರಕೂರು, ಬೇವನತ್ತ, ಎಸ್‌.ಐ.ಅನಂತಪುರ, ತಾಯಲೂರು, ಕುಪ್ಪಾಂಡಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಜಮೀನುಗಳಲ್ಲಿ ಬೆಳೆ ನಾಶವಾಗಿದೆ.

ಬರ ಪರಿಸ್ಥಿತಿ ನಡುವೆಯೂ ರೈತರು ಕೊಳವೆ ಬಾವಿ ಮತ್ತು ಕೃಷಿ ಹೊಂಡದ ನೀರು ಬಳಸಿಕೊಂಡು ಬೆಳೆ ಬೆಳೆದಿದ್ದರು. ರಾಗಿ, ತೊಗರಿ, ಜೋಳ, ಟೊಮೆಟೊ, ಪಪ್ಪಾಯ, ಬಾಳೆ, ಭತ್ತದ ಕೊಯ್ಲು ಆರಂಭವಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆಯು ದೊಡ್ಡ ಆಘಾತ ನೀಡಿದೆ.

ದಿಕ್ಕು ತೋಚುತ್ತಿಲ್ಲ: ‘ಬಡ್ಡಿ ಸಾಲ ಮಾಡಿ ನೀರಿನ ಸಮಸ್ಯೆ ನಡುವೆಯೂ ಬಾಳೆ ಬೆಳೆದಿದ್ದೆ. ಬಾಳೆ ಗಿಡಗಳು ಉತ್ತಮ ಫಸಲು ಬಿಟ್ಟಿದ್ದವು. ಮಳೆಯಿಂದ ಬೆಳೆ ನಾಶವಾಗಿದ್ದು, ದಿಕ್ಕು ತೋಚದಂತಾಗಿದೆ’ ಎಂದು ವಡ್ಡಹಳ್ಳಿಯ ರೈತ ವೆಂಕಟಾಚಲಪತಿ ಅಳಲು ತೋಡಿಕೊಂಡರು.

‘ಮಳೆ ಮತ್ತು ಗಾಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಗಾಳಿಯ ತೀವ್ರತೆಗೆ ಭತ್ತದ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಬಡ್ಡಿ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯು ಮಳೆ– ಗಾಳಿಗೆ ಮಣ್ಣು ಪಾಲಾಗಿದೆ’ ಎಂದು ಮೋತಕಪಲ್ಲಿ ಗ್ರಾಮದ ರೈತರು ಕಣ್ಣೀರಿಟ್ಟರು.

ನಷ್ಟದ ಸಮೀಕ್ಷೆ: ಕೊಯ್ಲಿಗೆ ಬಂದಿದ್ದ ಬೆಳೆ ಮಳೆಯಿಂದ ನಾಶವಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಾಶವಾಗಿರುವ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ ಸಮೀಕ್ಷೆ ನಡೆಸಿದರು. ರೈತರನ್ನು ಭೇಟಿಯಾದ ಅಧಿಕಾರಿಗಳು ಬೆಳೆಗೆ ಮಾಡಿದ್ದ ಖರ್ಚು ಮತ್ತು ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದರು.

ಜಿಲ್ಲೆಯಾದ್ಯಂತ ಶುಕ್ರವಾರ ಬೆಳಿಗ್ಗೆ ಕೆಲ ಕಾಲ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನದವರೆಗೆ ಬಿಡುವು ನೀಡಿದ್ದ ಮಳೆರಾಯ ಸಂಜೆ ವೇಳೆಗೆ ಮತ್ತೆ ಪ್ರತ್ಯಕ್ಷನಾದ. ಸಂಜೆ ನಂತರ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿ ತುಂತುರು ಮಳೆ ಸುರಿಯಿತು. ಶನಿವಾರವೂ ಮಳೆಯಾಗುವ ಸಾಧ್ಯತೆಯಿದ್ದು, ರೈತರು ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT