ಪಕ್ಷ ದ್ರೋಹ ಮಾಡಿಲ್ಲ: ನಾರಾಯಣಸ್ವಾಮಿ
ಕೋಲಾರ: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿಲ್ಲ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ನನ್ನ ರಾಜಕೀಯ ಗುರುವಾಗಿದ್ದು, ಅವರ ಹಾದಿಯಲ್ಲೇ ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರೆ ಆ ಬಗ್ಗೆ ಹೈಕಮಾಂಡ್ ನೋಟಿಸ್ ನೀಡಲಿ ಅಥವಾ ನಮ್ಮನ್ನು ಕರೆದು ವಿಚಾರಿಸಲಿ. ಪಕ್ಷ ವಿರೋಧಿ ಚಟುವಟಿಕೆ ಸಂಬಂಧ ಯಾವುದೇ ಸಾಕ್ಷ್ಯಾಧಾರವಿದ್ದರೆ ಹೇಳಲಿ’ ಎಂದು ಮುನಿಯಪ್ಪ ಆರೋಪಕ್ಕೆ ತಿರುಗೇಟು ನೀಡಿದರು.
‘ಗುರುಗಳಾದ ಮುನಿಯಪ್ಪ ಯಾವಾಗಲೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರ ಗರಡಿಯಲ್ಲಿ ಬೆಳೆದ ನಾನು ಸಹ ಪಕ್ಷ ನಿಷ್ಠೆಯಿಂದಲೇ ಕೆಲಸ ಮಾಡಿದ್ದೇನೆ. ಮುನಿಯಪ್ಪ ಅವರು ರಾಜಕೀಯವಾಗಿ ಏನೇ ಹೇಳಿದರೂ ಆಶೀರ್ವಾದ ಎಂದು ಭಾವಿಸುತ್ತೇನೆ. ನಮ್ಮ ಗುರುಗಳು ತಪ್ಪು ಮಾಡಿದ್ದರೆ ನಾನು ತಪ್ಪು ಮಾಡಿದ್ದೇನೆ ಎಂದರ್ಥ. ಒಂದು ವೇಳೆ ಅವರು ತಪ್ಪು ಮಾಡಿಲ್ಲ ಎಂದರೆ ನಾನೂ ಮಾಡಿರುವುದಿಲ್ಲ. ನಮಗೆ ಗುರುಗಳು ಆ ವಿದ್ಯೆ ಕಲಿಸಿಲ್ಲ’ ಎಂದು ಹೇಳಿದರು.
‘ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥೆ ಪರ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಮುನಿಯಪ್ಪ ಕಾಂಗ್ರೆಸ್ ಬಿಟ್ಟು ಎಂದಾದರೂ ಬೇರೆ ಪಕ್ಷದ ಪರ ಕೆಲಸ ಮಾಡ್ತಾರಾ? ಅವರು ಪಕ್ಷ ದ್ರೋಹ ಮಾಡದಿದ್ದ ಸಂದರ್ಭದಲ್ಲಿ ನಾನು ಮಾಡಲೂ ಸಾಧ್ಯವಿಲ್ಲ. ಇಷ್ಟಾದರೂ ಅವರು ನನಗೆ ಕಾಂಗ್ರೆಸ್ ಕಚೇರಿಗೆ ಕಾಲಿಡಬಾರದೆಂದು ಏಕೆ ಹೇಳಿದ್ದಾರೆ ಎಂಬ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.