ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸುವುದರ ಜತೆಗೆ 8 ಮತ್ತು 9ನೇ ತರಗತಿ ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಗಳ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ (ಎಸ್ಎಟಿಎಸ್) ಅಡಕ ಮಾಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.
ಇಲ್ಲಿ ಶನಿವಾರ ನಡೆದ ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ‘8 ಮತ್ತು 9ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ರೂಪಣಾತ್ಮಕ ಮೌಲ್ಯಮಾಪನದ ಆಧಾರದ ಮೇಲೆ ಪ್ರಕಟಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಈ ಫಲಿತಾಂಶವನ್ನು ಆನ್ಲೈನ್ನಲ್ಲಿ ಹಾಕಬೇಕು’ ಎಂದರು.
‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧ ಚಂದನ ವಾಹಿನಿಯಲ್ಲಿ ಮತ್ತು ಯೂಟ್ಯೂಬ್ನಲ್ಲಿ ಪ್ರಸಾರವಾಗುತ್ತಿರುವ ಮಾಹಿತಿಯನ್ನು ಗಮನಿಸುವಂತೆ ಮಕ್ಕಳಿಗೆ ಸೂಚಿಸಿ. ಶಿಕ್ಷಣ ಇಲಾಖೆಯಿಂದ ಈಗಾಗಲೇ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 3 ಬಾರಿ ಫೋನ್–ಇನ್ ಕಾರ್ಯಕ್ರಮ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ. ಶಾಲಾ ಹಂತದಲ್ಲಿ ಮಕ್ಕಳನ್ನು ಸಂಪರ್ಕಿಸಿ ಅವರ ಕಲಿಕಾ ಅಭ್ಯಾಸ ಗಮನಿಸಿ’ ಎಂದು ಹೇಳಿದರು.
‘ಶಿಕ್ಷಣ ಸಚಿವರು ಜೂನ್ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಸಂಬಂಧ ಸುಳಿವು ನೀಡಿದ್ದಾರೆ. ಮುಖ್ಯ ಶಿಕ್ಷಕರು ಎಚ್ಚೆತ್ತು ಮಕ್ಕಳನ್ನು ಸಂಪರ್ಕಿಸಿ ಪರೀಕ್ಷೆ ಸಂಬಂಧ ಅವರಿಗೆ ಆನ್ಲೈನ್ ಮೂಲಕ ಸಾಧ್ಯವಾದಷ್ಟು ಮಾರ್ಗದರ್ಶನ ಮಾಡಿ. ಅಕ್ಷರ ದಾಸೋಹ ಯೋಜನೆಯ ಆಹಾರ ಪದಾರ್ಥಗಳ ದಾಸ್ತಾನು ವಿವರವನ್ನು ಆನ್ಲೈನ್ ತಂತ್ರಾಂಶದಲ್ಲಿ ತುಂಬಬೇಕು’ ಎಂದು ತಿಳಿಸಿದರು.
ಅನುದಾನ ಬಿಡುಗಡೆ
‘ವಿದ್ಯಾರ್ಥಿಗಳಿಗೆ 2ನೇ ಜೊತೆ ಸಮವಸ್ತ್ರ ಒದಗಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಸಮವಸ್ತ್ರ ನೀಡಿಕೆಗೆ ಸಿದ್ಧತೆ ಮಾಡಿಕೊಳ್ಳಿ. ಶಾಲಾ ಪರಿಸರ ಮತ್ತು ಕೊಠಡಿಗಳ ಸ್ವಚ್ಛತೆಗೆ ಒತ್ತು ಕೊಡಿ. ಮೇ 4ರಿಂದ ಅನ್ವಯವಾಗುವಂತೆ ಮುಖ್ಯ ಶಿಕ್ಷಕರು, ಗುಮಾಸ್ತರು ಮತ್ತು ಡಿ ಗ್ರೂಪ್ ನೌಕರರ ಶೇ 100ರಷ್ಟು ಹಾಜರಾತಿ ಕಡ್ಡಾಯಗೊಳಿಸಲಾಗಿದೆ’ ಎಂದು ವಿವರಿಸಿದರು.
‘ಮಕ್ಕಳಿಂದ ಹಳೆ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಿರಿ. ಸಿಬ್ಬಂದಿ ಸೇವಾ ಪುಸ್ತಕಗಳನ್ನು ಜೆರಾಕ್ಸ್ ಮಾಡಿಸಿ ಬಿಇಒ ಅವರಿಂದ ದೃಢೀಕರಿಸಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿ. ನರೇಗಾ ಅನುದಾನದಲ್ಲಿ ಶಾಲೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಅವಕಾಶವಿದೆ. ಶಾಲಾ ಕಾಂಪೌಂಡ್ ನಿರ್ಮಾಣ, ಆವರಣ ಸಮತಟ್ಟು ಸಂಬಂಧ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ’ ಎಂದು ಸೂಚಿಸಿದರು.
ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ, ಇಸಿಒ ಮುನಿರತ್ನಯ್ಯಶೆಟ್ಟಿ, ಕ್ಷೇತ್ರ ಸಮನ್ವಯನಾಧಿಕಾರಿ ರಾಮಕೃಷ್ಣಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.