ಕೋಲಾರ: ತಾಲ್ಲೂಕಿನ ಮುದುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹೊರಗುಳಿದಿದ್ದ 3 ವಿದ್ಯಾರ್ಥಿಗಳನ್ನು ಶಾಲೆಗೆ ಮಂಗಳವಾರ ಮರು ಸೇರ್ಪಡೆ ಮಾಡಲಾಯಿತು.
ಬಿಹಾರ ಮೂಲದ ಈ 3 ಮಕ್ಕಳು ಕಳೆದ ಕೆಲ ತಿಂಗಳಿಂದ ಶಾಲೆಗೆ ಬರುತ್ತಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಹಾಗೂ ಶಿಕ್ಷಕರ ತಂಡವು ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತಂದಿತು. ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಬ್ಯಾಗ್ ಹಾಗೂ ಲೇಖನಿ ಸಾಮಗ್ರಿ ವಿತರಿಸಲಾಯಿತು.
‘ಕೋವಿಡ್ ಸಂದರ್ಭದಲ್ಲಿ ಕೆಲ ಕುಟುಂಬಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗಿವೆ. ಆ ಕುಟುಂಬಗಳ ಮಕ್ಕಳನ್ನು ಶಾಲೆಯಿಂದ ಹೊರಗುಳಿದ ಮಕ್ಕಳೆಂದು ಗುರುತಿಸಲಾಗಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ಕಾರ್ಯವನ್ನು ಚಾಚೂತಪ್ಪದೆ ನಿರ್ವಹಿಸುತ್ತಿದ್ದೇವೆ’ ಶ್ರೀನಿವಾಸನ್ ತಿಳಿಸಿದರು.
‘ಶಾಲಾ ಮುಖ್ಯ ಶಿಕ್ಷಕರು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಣ ಸಂಯೋಜಕರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಬೇಕು. ವಲಸೆ ಹೋದ ಕುಟುಂಬಗಳ ದಾಖಲೆಪತ್ರ ನಿರ್ವಹಣೆ ಮತ್ತು ಆ ಕುಟುಂಬಗಳಲ್ಲಿ ಮಕ್ಕಳಿದ್ದು, ಶಾಲೆಗೆ ಬಾರದಿದ್ದರೆ ಅಂತಹವರನ್ನು ಪತ್ತೆ ಹಚ್ಚಿ ಶಾಲೆಗಳಿಗೆ ದಾಖಲು ಮಾಡಬೇಕೆಂದು ಇಲಾಖೆ ಆದೇಶವಿದೆ’ ಎಂದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿ.ಪ್ರೀತಿ, ಮುದುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವನಿತಾಕುಮಾರಿ, ಶಿಕ್ಷಕರಾದ ಚಲಪತಿ, ಗಾಯತ್ರಿ, ವರಲಕ್ಷ್ಮಿ, ಸ್ವರ್ಣಲತಾ ಹಾಜರಿದ್ದರು.