ಕೋಲಾರ: ‘ಶಿಕ್ಷಕರನ್ನು ಕಚೇರಿಗೆ ಅಲೆಸದೆ ಕಾಲಮಿತಿಯಲ್ಲಿ ಅವರ ಕೆಲಸ ಮಾಡಿಕೊಡಿ. ಕಚೇರಿಗೆ ಬರುವ ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಿ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿ' ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ಸಿಬ್ಬಂದಿಗೆ ಮನವಿ ಮಾಡಿದರು.
ಇಲ್ಲಿ ಸೋಮವಾರ ಕಾರ್ಯಭಾರ ವಹಿಸಿಕೊಂಡು ಮಾತನಾಡಿ, ‘ಕೋಲಾರ ಜಿಲ್ಲೆ ನನಗೆ ಚಿರಪರಿಚಿತ. ಈ ಹಿಂದೆ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ, ಮಾಲೂರು ಮತ್ತು ಕೆಜಿಎಫ್ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ’ ಎಂದರು.
‘ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯು ತಾಲ್ಲೂಕಿನ ಶಿಕ್ಷಕರ ಆಡಳಿತಾತ್ಮಕ ಕಾರ್ಯಗಳ ಕೇಂದ್ರ. ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡುವ ಮೂಲಕ ಅವರ ಕೆಲಸ ಮಾಡಿಕೊಡೋಣ. ತಿಂಗಳ 5ನೇ ತಾರೀಖಿಗೆ ಮುನ್ನವೇ ಶಿಕ್ಷಕರ ವೇತನ ಬಟವಾಡೆ ಆಗಿರಬೇಕು, ಇಲಾಖೆಯಲ್ಲಿ ಎಷ್ಟೇ ಕಾರ್ಯ ಒತ್ತಡವಿದ್ದರೂ ವೇತನ ವಿಳಂಬಕ್ಕೆ ಅವಕಾಶ ನೀಡಬಾರದು’ ಎಂದು ತಾಕೀತು ಮಾಡಿದರು.
‘ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ತಾಲ್ಲೂಕು ಪ್ರಥಮ ಸ್ಥಾನಕ್ಕೆ ಏರಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಯೋಜಕರು ಕಾಲಕಾಲಕ್ಕೆ ಇಲಾಖೆ ನೀಡುವ ನಿರ್ದೇಶನಗಳನ್ನು ಪಾಲಿಸುವಂತೆ ಶಾಲೆಗಳಿಗೆ ಮಾಹಿತಿ ಸೂಚನೆ ನೀಡಬೇಕು. ಶೈಕ್ಷಣಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳ ಕಲಿಕೆ ಮಟ್ಟ ಸುಧಾರಣೆ ಮಾಡಬೇಕು’ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಕಚೇರಿ ವ್ಯವಸ್ಥಾಪಕ ಮುನಿಸ್ವಾಮಿಗೌಡ, ಅಧೀಕ್ಷಕರಾದ ಗಿರೀಶ್ಕುಮಾರ್, ಬಿಂದು, ಶಿಕ್ಷಣ ಸಂಯೋಜಕರಾದ ಮುನಿರತ್ನಯ್ಯಶೆಟ್ಟಿ, ರಾಘವೇಂದ್ರ, ಆರ್.ಶ್ರೀನಿವಾಸನ್, ಬೈರೆಡ್ಡಿ ಹಾಜರಿದ್ದರು.