ಕೋಲಾರ: ‘ಕೋಚಿಮುಲ್ಗೆ ಅಗತ್ಯವಿರುವ ರಟ್ಟಿನ ಪೆಟ್ಟಿಗೆ (ಕಾರ್ಗೊಟೆಡ್ ಬಾಕ್ಸ್) ಪೂರೈಕೆಗೆ ಕರೆದಿರುವ ಇ-–ಟೆಂಡರ್ನಲ್ಲಿ ಸಣ್ಣ ಕೈಗಾರಿಕೆಗಳನ್ನು ಕಡೆಗಣಿಸಲಾಗಿದೆ’ ಎಂದು ಕರ್ನಾಟಕ ಸೆಮಿ ಆಟೋಮಿಟಿಕ್ ಕಾರ್ಗೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ಕುಮಾರ್ ದೂರಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾರ್ಗೊಟೆಡ್ ಬಾಕ್ಸ್ ಪೂರೈಕೆಯ ಇ-–ಟೆಂಡರ್ನಲ್ಲಿ ದೊಡ್ಡ ಉದ್ದಿಮೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಣ್ಣ ಕೈಗಾರಿಕೆಗಳನ್ನು ಕಡೆಗಣಿಸಲಾಗಿದೆ. ದೊಡ್ಡ ಉದ್ದಿಮೆಗಳಿಗೆ ಟೆಂಡರ್ ನೀಡಿದರೆ ಹಾಲು ಒಕ್ಕೂಟಕ್ಕೆ ಸುಮಾರು ₹ 3.50 ಕೋಟಿ ನಷ್ಟವಾಗಲಿದೆ’ ಎಂದರು.
‘ಬೆಂಗಳೂರು ಸುತ್ತಮುತ್ತ ಸಣ್ಣ ಕೈಗಾರಿಕಾ ಪ್ರದೇಶಗಳಲ್ಲಿ ಮುದ್ರಣಾ ಮತ್ತು ಪ್ಯಾಕೇಜಿಂಗ್ ಘಟಕ ಸ್ಥಾಪಿಸಿ ಟೆಂಡರ್ ನಿಯಮದ ಪ್ರಕಾರ 15 ವರ್ಷಗಳಿಂದ ಹಾಲು ಒಕ್ಕೂಟಕ್ಕೆ ಕಾರ್ಗೊಟೆಡ್ ಬಾಕ್ಸ್ ಪೂರೈಕೆ ಮಾಡುತ್ತಿದ್ದೇವೆ. ಆದರೆ, ಕೋಚಿಮುಲ್ ಆಡಳಿತ ಮಂಡಳಿಯು ಈ ಬಾರ ಇ-–ಟೆಂಡರ್ ಕರೆದಿದೆ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು’ ಎಂದು ವಿವರಿಸಿದರು.
ಸಂಕಷ್ಟ: ‘ಕೋಚಿಮುಲ್ ಆಡಳಿತ ಮಂಡಳಿ ಉದ್ದೇಶಪೂರ್ವಕವಾಗಿ ಸಣ್ಣ ಉದ್ದಿಮೆದಾರರನ್ನು ಕಡೆಗಣಿಸಿ ಬೃಹತ್ ಉದ್ದಿಮೆದಾರರು ಮಾತ್ರ ಇ–ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಕೊರೊನಾ ಸೋಂಕಿನಿಂದ ಎಂಎಸ್ಎಂಇ. ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಕೋಚಿಮುಲ್ ತನ್ನ ನೀತಿ ಬದಲಿಸಿಕೊಂಡು ಸಣ್ಣ ಉದ್ಯಮಗಳಿಗೂ ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು’ ಎಂದು ಅಸೋಸಿಯೇಷನ್ ನಿರ್ದೇಶಕ ಆರ್.ಆಶೋಕ್ ಮನವಿ ಮಾಡಿದರು.
ಅಸೋಸಿಯೇಷನ್ ನಿರ್ದೇಶಕರಾದ ನಾರಾಯಣಸ್ವಾಮಿ, ದೀಪಕ್, ನಾಗರಾಜ್, ಕುಮಾರ್, ಆನಂದ್ ನಾಗರಾಜು ಹಾಜರಿದ್ದರು.