ಬಂಗಾರಪೇಟೆ (ಕೋಲಾರ): ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸೋಮವಾರ ನಡೆದ ಮತದಾನದ ವೇಳೆ ಇಲ್ಲಿಯ ತಾಲ್ಲೂಕು ಕಚೇರಿ ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು.
ಮತ ಕೇಂದ್ರದ ಸುತ್ತ ಎರಡೂ ಪಕ್ಷಗಳ ಕಾರ್ಯಕರ್ತರು ಶಿಕ್ಷಕ ಮತದಾರರಲ್ಲಿ ಮತಯಾಚಿಸುತ್ತಿದ್ದರು. ಮತ ಕೇಂದ್ರದೊಳಗೆ ತೆರಳಿ ಮತದಾರರನ್ನು ಓಲೈಸಲಾಗುತ್ತಿದೆ ಎಂದು ಉಭಯ ಪಕ್ಷಗಳ ಕಾರ್ಯಕರ್ತರು ವಾಗ್ವಾದ ನಡೆಸಿದರು.
ಪೊಲೀಸರ ಎದುರಿನಲ್ಲಿಯೇ ಪರಸ್ಪರ ನಿಂದಿಸಿಕೊಂಡ ಎರಡೂ ಪಕ್ಷಗಳ ಕಾರ್ಯಕರ್ತರು ಕೈ ಮಿಲಾಯಿಸಲು ಮುಂದಾದರು. ಆಗ ಮಧ್ಯೆ ಪ್ರವೇಶಿಸಿದ ಪೊಲೀಸರು ಎಲ್ಲರನ್ನೂ ತಡೆದು ಬ್ಯಾರಿಕೇಡ್ ಹಾಕಿದರು.
ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಬಿಜೆಪಿ ಮುಖಂಡರು, ‘ಬ್ಯಾರಿಕೇಡ್ ಹಾಕಿ ನಮ್ಮನ್ನು ಮಾತ್ರ ತಡೆಯುತ್ತಿರುವಿರಿ’ ಎಂದು ದೂರಿದರು.
ಪೊಲೀಸರ ಎದುರೇ ಕೈ ಕೈ ಮಿಲಾಯಿಸಲು ಮುಂದಾದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರ ಎದುರೇ ಕೈ ಕೈ ಮಿಲಾಯಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು
ಬಿಜೆಪಿಯ ಕಾರ್ಯಕರ್ತರು ಪದೇ ಪದೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ಮತ್ತು ರೌಡಿಸಂ ಮಾಡುತ್ತಿದ್ದಾರೆ. ಬಂಗಾರಪೇಟೆ ಕ್ಷೇತ್ರದಲ್ಲಿ ನಾನು ಬದುಕಿರುವ ತನಕ ರೌಡಿಸಂಗೆ ಹೆದರಲ್ಲ.
– ಎಸ್.ಎನ್. ನಾರಾಯಣಸ್ವಾಮಿ ಕಾಂಗ್ರೆಸ್ ಶಾಸಕ
ಪ್ರಜಾಪ್ರಭುತ್ವದಲ್ಲಿ ಮತ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಅಧಿಕಾರವಿದೆ ಎಂಬ ಉದ್ದೇಶದಿಂದ ಪದೇ ಪದೇ ಗಲಾಟೆಗೆ ಪ್ರಚೋದನೆ ನೀಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ.
– ಬಿ.ವಿ. ಮಹೇಶ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಲಾರ