ಕೋಲಾರ: ‘ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಪ್ರಭಾರ) ಸಿ.ಸತ್ಯಭಾಮ ತಿಳಿಸಿದರು.
ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾ ಯೋಜನೆ ಅನುಮೋದನೆ ಸಂಬಂಧ ಇಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂಬುದನ್ನು ಪರಿಶೀಲಿಸಿ ಆ ಗ್ರಾಮಗಳಲ್ಲಿ ಪ್ರಾಮಾಣಿಕವಾಗಿ ಅನುದಾನ ಬಳಸಿ ನೀರು ಪೂರೈಸಬೇಕು’ ಎಂದು ಸೂಚಿಸಿದರು.
‘ಜನವಸತಿ ಪ್ರದೇಶಗಳು ಹೆಚ್ಚಾದಂತೆ ಆ ಮಾಹಿತಿಯನ್ನು ಐಎಂಇಎಸ್ನಲ್ಲಿ ಅಡಕ ಮಾಡಬೇಕು. ಇದರಿಂದ ಮುಂದೆ ಆ ಪ್ರದೇಶಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬರುತ್ತದೆ. ನೀರಿನ ಅನುದಾನ ಸದ್ಬಳಕೆ ಆಗಬೇಕು’ ಎಂದು ಹೇಳಿದರು.
‘ಮಾಲೂರು ತಾಲ್ಲೂಕಿನ ಮಾರ್ಕಂಡೇಯ ಡ್ಯಾಂ ಕಾಮಗಾರಿ 2008ರಲ್ಲಿ ಆರಂಭವಾಗಿತ್ತು. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಿ’ ಎಂದು ಸೂಚನೆ ನೀಡಿದರು.
‘ಮಾರ್ಕಂಡೇಯ ಡ್ಯಾಂನಿಂದ ಮಾಲೂರು ತಾಲ್ಲೂಕಿನ ಟೇಕಲ್, ಬನಹಳ್ಳಿ, ನೂಟವೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 23 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು’ ಎಂದು ಕಾರ್ಯ ನಿರ್ವಾಹಕ ಎಂಜಿನಿಯರ್ ನಾರಾಯಣಸ್ವಾಮಿ ಮಾಹಿತಿ ನೀಡಿದರು.
ದೂರುಗಳಿವೆ: ‘ಅಧಿಕಾರಿಗಳು ಕೊಳವೆ ಬಾವಿ ಕೊರೆಯುವ ಲಾರಿ ಎಲ್ಲಿವರೆಗೆ ಹೋಗಲು ಸಾಧ್ಯವಾಗುತ್ತದೆಯೋ ಅಲ್ಲಿಯೇ ಜಾಗ ಗುರುತಿಸಿ ಕೊಳವೆ ಬಾವಿ ಕೊರೆಸುತ್ತಾರೆ ಎಂದು ದೂರುಗಳಿವೆ. ಅಧಿಕಾರಿಗಳ ಈ ಕ್ರಮ ಸರಿಯಲ್ಲ. ನೀರು ಸಿಗುವ ಜಾಗಕ್ಕೆ ಲಾರಿ ಕರೆದುಕೊಂಡು ಹೋಗಿ ಕೊಳವೆ ಬಾವಿ ಕೊರೆಸುವಂತೆ ಭೂ ವಿಜ್ಞಾನಿಗಳಿಗೆ ಸೂಚನೆ ನೀಡಿ’ ಎಂದು ಹೇಳಿದರು.
ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ನಾಗರಾಕ್, ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.