ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ವೃತ್ತಿ ಘನತೆ ಉಳಿಸಿಕೊಳ್ಳಬೇಕು: ಸಲಹೆ

Last Updated 5 ಸೆಪ್ಟೆಂಬರ್ 2021, 14:14 IST
ಅಕ್ಷರ ಗಾತ್ರ

ಕೋಲಾರ: ‘ಗುರುವಿನ ಮಾರ್ಗದರ್ಶನವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗದು’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ ಅಭಿಪ್ರಾಯಪಟ್ಟರು.

ಶಾಲೆಯಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ‘ಗುರು, ಗುರಿ ಇಲ್ಲದವರಿಂದ ಏನನ್ನೂ ಮಾಡಲಾಗದು. ಸದೃಢ ಸಮಾಜ ನಿರ್ಮಿಸುವ ಸದುದ್ದೇಶದಿಂದ ಕೆಲಸ ಮಾಡುವ ಶಿಕ್ಷಕರು ಮಾತ್ರ ಉತ್ತಮ ದೇಶ ಕಟ್ಟಬಲ್ಲರು’ ಎಂದು ಹೇಳಿದರು.

‘ಶಾಲೆಗಳಲ್ಲಿ ಇಂದು ಮಕ್ಕಳನ್ನು ಹೊಡೆಯುವಂತಿಲ್ಲ. ಆದರೆ, ಹಿಂದಿನ ಕಾಲದಲ್ಲಿ ಗುರುಗಳಿಂದ ಏಟು ತಿಂದಿದ್ದೇವೆ. ಆ ಹಕ್ಕು ಅವರಿಗೆ ಇರುತ್ತದೆ. ತಂದೆ ತಾಯಿಯ ಮಾತು ಕೇಳದ ಮಕ್ಕಳು ಗುರುವಿನ ಮಾತು ಕೇಳುತ್ತಾರೆ ಎಂದರೆ ಅವರು ಮಕ್ಕಳ ಮೇಲೆ ಬೀರಿರುವ ಪ್ರಭಾವ ಎಂತದ್ದು ಎಂಬುದನ್ನು ಅರಿಯಬೇಕು’ ಎಂದರು.
‘ಶಿಕ್ಷಕರು ಮಕ್ಕಳ ಕಲಿಕೆಗೆ ಮಾತ್ರ ಸೀಮಿತರಲ್ಲ. ಶಿಕ್ಷಕರೆಂದರೆ ದೈವಿ ಭಾವನೆಯಿದೆ. ಶಿಕ್ಷಕರು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸೋಲಬಾರದು. ವೃತ್ತಿ ಘನತೆ ಉಳಿಸಿಕೊಳ್ಳಬೇಕು. ಕೋವಿಡ್ ಕೆಲಸದಲ್ಲೂ ದುಡಿಯುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯ’ ಎಂದು ಸ್ಮರಿಸಿದರು.

‘ಶಿಕ್ಷಕರು ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ದೇಶಕ್ಕೆ ಅಮೂಲ್ಯ ಮಾನವ ಸಂಪನ್ಮೂಲ ನೀಡುವ ಶಿಕ್ಷಕರ ಆಶಯ ಶಿಷ್ಯರ ಅಭ್ಯುದಯವಾಗಿದೆ. ಶಿಕ್ಷಣ ಎಂದರೆ ಅಂಕ ಗಳಿಕೆ ಮಾತ್ರವಲ್ಲ, ಜ್ಞಾನ ತುಂಬುವುದಾಗಿದೆ. ಶಿಕ್ಷಣದ ಜ್ಞಾನ ದೀವಿಗೆ ಮೂಲಕ ಯುವ ಪೀಳಿಗೆಗೆ ದಾರಿ ತೋರದಿದ್ದರೆ ದೇಶ ಕಷ್ಟಕ್ಕೆ ಸಿಲುಕುತ್ತದೆ’ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಚ್ಚಿದಾನಂದಮೂರ್ತಿ ತಿಳಿಸಿದರು.

ಎಸ್‌ಡಿಎಂಸಿ ಸದಸ್ಯ ರಾಮಚಂದ್ರಪ್ಪ, ಶಿಕ್ಷಕರಾದ ಶ್ವೇತಾ, ಸುಗುಣಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT