ಕೋಲಾರ: ‘ಜಾತಿ, ಧರ್ಮದ ಎಲ್ಲೆ ಮೀರಿ ಶ್ರೀರಾಮನ ಸ್ಮರಣೆಗೆ ಒಂದಾಗುವ ಸಮಾಜ ಆ ಮಹಾ ಪುರುಷನ ಆದರ್ಶ ಪಾಲಿಸಬೇಕು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ಹೇಳಿದರು.
ಯುವಶಕ್ತಿ ಸೇವಾ ಸಮಿತಿಯು ನಗರದ ಪೇಟೆಚಾಮನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀರಾಮನವಮಿ ಆಚರಣೆಯಲ್ಲಿ ಮಾತನಾಡಿ, ‘ದೇಶದಲ್ಲಿ ಕೋವಿಡ್ ಮಹಾಮಾರಿಯ ಆತಂಕ ಆವರಿಸಿದೆ. ಕೊರೊನಾ 2ನೇ ಅಲೆ ಭೀಕರವಾಗಿದೆ. ಸೋಂಕು ತಡೆಗೆ ಸಾರ್ವಜನಿಕರು ಸರ್ಕಾರದ ಜತೆ ಕೈಜೋಡಿಸಬೇಕು. ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಮನವಿ ಮಾಡಿದರು.
‘ಕೊರೊನಾ ಸೋಂಕು ತಡೆಗಾಗಿ ಸರ್ಕಾರ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದೆ. ಆದರೂ ಯುವಕರು ರಾಮನ ಮೇಲಿನ ಭಕ್ತಿಯಿಂದ ಹಬ್ಬ ಆಚರಿಸುತ್ತಿದ್ದಾರೆ. ಜಾತಿ ಧರ್ಮದ ಕಟ್ಟಳೆ ಬದಿಗೊತ್ತಿ ಮಜ್ಜಿಗೆ ಪಾನಕ ಹಂಚುವ ಮೂಲಕ ಸೌಹಾರ್ದತೆ ಮೆರೆಯಬೇಕು ಇಡೀ ವಿಶ್ವವೇ ಒಂದು ಕುಟುಂಬವೆಂದು ಭಾವಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಜನಸೇವೆ ಮಾಡುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಮನಸ್ಸು ಮತ್ತು ಆತ್ಮ ಸಮನ್ವಯಗೊಳಿಸಲು ಧ್ಯಾನ ಅತ್ಯವಶ್ಯಕ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದೇ ಮಾನವ ಧರ್ಮ’ ಎಂದು ಯುವಶಕ್ತಿ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಸುಬ್ಬು ಅಭಿಪ್ರಾಯಪಟ್ಟರು.
ಚಿತ್ರನಟ ಶ್ರೀನಿವಾಸ್, ವಕೀಲ ಮಂಜುನಾಥ್, ಯುವಶಕ್ತಿ ಸೇವಾ ಸಮಿತಿಯ ಸದಸ್ಯರಾದ ಕಲ್ಯಾಣ್, ಕೇಶವ, ಮುರಳಿ, ರಂಜಿತ್, ಸಂದೀಪ್, ದರ್ಶನ್ ಪಾಲ್ಗೊಂಡರು.