ಬಂಗಾರಪೇಟೆ: ಚಿನ್ನದ ಅಂಗಡಿಗಳಿಗೆ ಆಭರಣ ಮಾರಾಟ ಮಾಡಲು ಹೊರಟಿದ್ದ ವ್ಯಾಪಾರಿಯಿಂದ ಎರಡೂವರೆ ಕೆ.ಜಿ. ಚಿನ್ನದ ಆಭರಣಗಳನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಭಾನುವಾರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬೆಂಗಳೂರಿನ ತಮ್ಮ ಅಂಗಡಿಯಲ್ಲಿ ತಯಾರಿಸಿದ ಚಿನ್ನಾಭರಣಗಳನ್ನು ಬಂಗಾರಪೇಟೆ ಮತ್ತು ಕೆಜಿಎಫ್ ಚಿನ್ನದ ಅಂಗಡಿಗಳಿಗೆ ಕೊಡಲು ಚಿನ್ನಾಭರಣ ವರ್ತಕ ಗೌತಮ್ ಚಂದ್ ಎಂಬುವವರು ಭಾನುವಾರ ಮಧ್ಯಾಹ್ನ ಬೈಕ್ನಲ್ಲಿ ಬಂಗಾರಪೇಟೆಯಿಂದ ಕೆಜಿಎಫ್ಗೆ ಹೊರಟಿದ್ದರು.
ಮಾರ್ಗಮಧ್ಯೆ ಪಟ್ಟಣದ ಬಸ್ ನಿಲ್ದಾಣದ ಬಳಿ ಟೊಮೆಟೊ ಖರೀದಿಸಲು ಬೈಕ್ ನಿಲ್ಲಿಸಿದ್ದರು. ಬೈಕ್ನಲ್ಲಿಯೇ ಕುಳಿತು ಟೊಮೆಟೊ ಖರೀದಿ ಮಾಡುತ್ತಿದ್ದಾಗ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಇಬ್ಬರು ಚಿನ್ನಾಭರಣ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾದರು.
ಚಿನ್ನಾಭರಣ ವರ್ತಕ ಗೌತಮ್ ಚಂದ್ ಅವರು ಬಂಗಾರಪೇಟೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಸ್ಥಳಕ್ಕೆ ಭೇಟಿ ನೀಡಿದ್ದರು. ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.