ಮಾಲೂರು (ಕೋಲಾರ ಜಿಲ್ಲೆ): ತಾಲ್ಲೂಕಿನ ಜಯಮಂಗಲ ಗ್ರಾಮ ಪಂಚಾಯಿತಿಯ ಚಿಕ್ಕ ತಿರುಪತಿ ಕ್ರಾಸ್ ಬಳಿ ಗುರುವಾರ ಟಿಪ್ಪರ್ ಹಾಗೂ ಟಾಟಾ ಸುಮೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಕೂಲಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ತಮಿಳುನಾಡಿನ ಅಮ್ಮಗೊಂಡಪಲ್ಲಿಯ ಅನಿತಾ, ಶ್ರೀಕಾಂತ್, ಯಲ್ಲಮ್ಮ, ರಾಣಿಯಮ್ಮ, ಸುಶೀಲಮ್ಮ, ಮುನಿ ಲಕ್ಷ್ಮಮ್ಮ, ಲಲಿತಮ್ಮ, ಚಂದ್ರಮ್ಮ, ರಮೇಶ್, ತಿಮ್ಮಕ್ಕ, ಶೋಭಾ, ಲಕ್ಷ್ಮಮ್ಮ , ಟಾಟಾ ಸುಮೋ ಚಾಲಕ ಶ್ರೀಕಾಂತ್ ಎಂದು ಗುರುತಿಸಲಾಗಿದೆ .
ಘಟನೆ ವಿವರ: ಟಾಟಾ ಸುಮೋ ವಾಹನದಲ್ಲಿ ಕೂಲಿ ಕಾರ್ಮಿಕರು ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮದ ಬಳಿ ಕೂಲಿ ಕೆಲಸಕ್ಕೆ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ತೆರಳುತ್ತಿದ್ದಾಗ ಚಿಕ್ಕ ತಿರುಪತಿ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಐವರಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಹಾಗೂ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.