ಕೋಲಾರ: ‘ಅಡುಗೆ ಸಿದ್ಧಪಡಿಸಿ ರುಚಿಯಾಗಿ ಬಡಿಸುವ ಅಡುಗೆ ಸಿಬ್ಬಂದಿ ಮತ್ತು ದೇವರ ಪೂಜೆ ನಿರ್ವಹಿಸುವ ಪವಿತ್ರ ಕಾರ್ಯ ಮಾಡುವ ಅರ್ಚಕರನ್ನು ಅಸಂಘಟಿತ ಕಾರ್ಮಿಕರೆಂದು ಸರ್ಕಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಂತಸ ವ್ಯಕ್ತಪಡಿಸಿದರು.
ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ತಾಲ್ಲೂಕಿನ ಕೊಂಡರಾಜನಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಡುಗೆ ಕಾರ್ಮಿಕರು ಹಾಗೂ ಅರ್ಚಕರಿಗೆ ದಿನಸಿ ವಿತರಿಸಿ ಮಾತನಾಡಿದರು.
‘ಮದುವೆ, ಗೃಹಪ್ರವೇಶದಂತಹ ಶುಭ ಸಮಾರಂಭಗಳಲ್ಲಿ ಸಾವಿರಾರು ಜನರಿಗೆ ಅಡುಗೆ ಮಾಡಿ ಬಡಿಸಿ ಹಸಿವು ನೀಗಿಸುವ ಅಡುಗೆ ಕಾರ್ಮಿಕರು ಎಲೆಮರೆಯ ಕಾಯಂತೆ ಇರುತ್ತಾರೆ. ಸರ್ಕಾರ ಇವರ ಶ್ರಮ ಗುರುತಿಸಿ ಅಸಂಘಟಿತ ಕಾರ್ಮಿಕರೆಂದು ಘೋಷಿಸಿ ಸೌಲಭ್ಯ ನೀಡಲು ಮುಂದಾಗಿದೆ. ಅಡುಗೆ ಕಾರ್ಮಿಕರು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.
‘ಸಮಾಜದಲ್ಲಿ ಶಾಂತಿ, ಒಳ್ಳೆಯ ಮಳೆ ಬೆಳೆಗಾಗಿ ದೇವರಿಗೆ ಪೂಜೆ ಮಾಡುವ ಅರ್ಚಕರು, ಶುಭ ಕೋರುವ ಪುರೋಹಿತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇವರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಸಹಾಯ ಮಾಡಿದೆ. ಈ ಕಾರ್ಮಿಕರಿಗೆ ಮತ್ತಷ್ಟು ಸೌಲಭ್ಯ ಒದಗಿಸಬೇಕು. ಸಮಾಜಕ್ಕಾಗಿ ದುಡಿಯುವ ಇವರಿಗೆ ವಿವಿಧ ಯೋಜನೆಗಳನ್ನು ಒದಗಿಸುವ ಅಗತ್ಯವಿದೆ’ ಎಂದು ತಿಳಿಸಿದರು.
ಗುರುತಿನ ಚೀಟಿ: ‘ಸರ್ಕಾರ ಅಡುಗೆ ಕಾರ್ಮಿಕರು ಮತ್ತು ಅರ್ಚಕರಿಗೆ ಸೌಲಭ್ಯ ನೀಡಲು ಮುಂದೆ ಬಂದಿದೆ. ಮೊದಲು ಹೆಸರು ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದುಕೊಳ್ಳಿ. ಇದರಿಂದ ಆರೋಗ್ಯ ಸೇವೆ, ಮಕ್ಕಳ ಶಿಕ್ಷಣಕ್ಕೆ ನೆರವು ಸಿಗಲಿದೆ’ ಎಂದು ರಾಜ್ಯ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್ ವಿವರಿಸಿದರು.
‘ರುಚಿಯ ಜತೆಗೆ ಶುಚಿಯಾದ ಆಹಾರ ತಯಾರಿಸಿ ಜನರ ಹಸಿವು ನೀಗಿಸುವ ಕಾರ್ಯದಲ್ಲಿ ಎಂದೂ ತಪ್ಪು ಮಾಡುವುದಿಲ್ಲ. ನಮ್ಮನ್ನೂ ಕಾರ್ಮಿಕರೆಂದು ಪರಿಗಣಿಸುವ ಮೂಲಕ ಸಮಾಜ ಗುರುತಿಸುವಂತೆ ಮಾಡಿರುವ ಸರ್ಕಾರಕ್ಕೆ ಧನ್ಯವಾದ’ ಎಂದು ರಾಜ್ಯ ಅಡುಗೆ ಕಾರ್ಮಿಕರ ಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್ಬಾಬು ಹೇಳಿದರು.
ಜಿಲ್ಲಾ ಪುರೋಹಿತರ ಸಂಘದ ಸದಸ್ಯ ಮಂಜುನಾಥ್ ಆಚಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಅಡುಗೆ ಕಾರ್ಮಿಕರ ಸಂಘದ ಶ್ರೀನಿವಾಸಗೌಡ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.